ಉಡುಪಿ: ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಈ ವೇಳೆ ತಮ್ಮ ಪತ್ನಿ ಹೆಸರಿನಲ್ಲಿ ದೇವಸ್ಥಾನಕ್ಕೆ ₹9,99,999 ದೇಣಿಗೆ ನೀಡಿದರು.
ನಂತರ ಮಾತನಾಡಿದ ಅವರು, ದೇವರು ವರ-ಶಾಪ ಕೊಡಲ್ಲ, ಅವಕಾಶ ಮಾತ್ರ ಕೊಡ್ತಾನೆ. ಮಾತೃಭೂಮಿ, ಭೂತಾಯಿ, ದೇವಿ ದರ್ಶನ ಮಾಡುವ ಅವಕಾಶ ಸಿಕ್ಕಿದೆ ಎಂದರು.
ಯಾವ ಧರ್ಮದಲ್ಲೂ ಯಾರಿಗೂ ತೊಂದರೆ ಕೊಡಬೇಕೆಂದು ಇಲ್ಲ. ನಮ್ಮ ಧರ್ಮವನ್ನ ನಾವು ಕಾಪಾಡಬೇಕು. ಈ ದೇವಿ ಹೂವಿನಹಾರವನ್ನೂ ತೆಗೆದುಕೊಳ್ಳುತ್ತದೆ, ಹಣ್ಣೂ ತೆಗೆದುಕೊಳ್ಳುತ್ತದೆ, ಕೋಳಿ ಹಾಗೂ ಕುರಿಯನ್ನೂ ತೆಗೆದುಕೊಳ್ಳುತ್ತದೆ ಎಂದು ಇಲ್ಲಿನ ದೇವಸ್ಥಾನದ ವ್ಯವಸ್ಥಾಪಕರು ತಿಳಿಸಿದ್ದಾರೆ. ಇಲ್ಲಿ ದೇವಸ್ಥಾನದ ಕೆತ್ತನೆ ಮಾಡಿರುವವರಿಗೆ ಹಾಗೂ ದೇಗುಲಕ್ಕೆ ದಾನ ಮಾಡಿರುವವರಿಗೆ ಈ ದೇವಿ ಅನುಗ್ರಹಿಸುತ್ತಾರೆ ಎಂಬ ಸಂಪೂರ್ಣವಾದ ನಂಬಿಕೆ ನನಗೆ ಕಾಣಿಸುತ್ತಿದೆ ಎಂದು ಹೇಳಿದರು.
ಭಕ್ತಿ ಇಲ್ಲದೆ ಯಾವ ಮನುಷ್ಯನೂ ಬದುಕಲು ಸಾಧ್ಯವಿಲ್ಲ. ಲಕ್ಷಾಂತರ ಜನ ಭಕ್ತರು ಈ ದೇವಾಲಯಕ್ಕೆ ಬಂದು ದೇವಿಯ ಅನುಗ್ರಹ ಪಡೆಯುತ್ತಾರೆ ಎಂಬುದನ್ನ ನಾನು ತಿಳಿದಿದ್ದೇನೆ. ಎಲ್ಲಾ ಕಾರ್ಯಕ್ರಮ ಮುಗಿದ ಮೇಲೆ ಮತ್ತೆ ಕ್ಷೇತ್ರಕ್ಕೆ ಫ್ಯಾಮಿಲಿ ಜೊತೆ ಬರುತ್ತೇನೆ ಎಂದು ಡಿಸಿಎಂ ಹೇಳಿದರು.