ಎಕ್ಸ್‌ಪ್ರೆಸ್‌ವೇ ಬದಿಗಳಲ್ಲಿ ಇರೋ ಬ್ರೇಸಿಂಗ್ ಕದ್ದು ಗುಜರಿಗೆ ಹಾಕಬೇಡಿ : ಪ್ರತಾಪ್ ಸಿಂಹ

ಮಂಗಳವಾರ, 6 ಜೂನ್ 2023 (08:51 IST)
ಮೈಸೂರು : ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯ ಬದಿಗಳಲ್ಲಿ ಅಳವಡಿಸಲಾಗಿರುವ ಕಬ್ಬಿಣದ ಬೇಲಿ ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತನ ಪ್ರಕರಣ ಹೆಚ್ಚಾಗಿದೆ.

ಈ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಬೇಲಿಗಳನ್ನು ಕದಿಯಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಸೋಮವಾರ ಇದಕ್ಕೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಟ್ವಿಟ್ಟರ್ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಸಂಸದ, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ವಿದ್ಯುತ್ ಕಂಬಗಳ ಬ್ರೆಸಿಂಗ್ ಕದ್ದು ಗುಜರಿಗೆ ಹಾಕುತ್ತಿದ್ದಾರೆ ಎಂಬುದಕ್ಕೆ ತಾಜಾ ಉದಾಹರಣೆ ನೋಡಿ ಹಾಗೂ ವ್ಯತ್ಯಾಸವನ್ನು ಗಮನಿಸಿ ಎಂದು ಬರೆದುಕೊಂಡಿದ್ದಾರೆ.

ಕಳ್ಳತನಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಪ್ರತಾಪ್ ಸಿಂಹ, ದಶಪಥ ಹೆದ್ದಾರಿಯ ಬದಿಗಳಲ್ಲಿ ಅಳವಡಿಸಿರುವ ಬೇಲಿಯನ್ನು ಕಳವು ಮಾಡಬೇಡಿ. ಇದು ನಿಮ್ಮದೇ ಹಣದಲ್ಲಿ ನಿರ್ಮಿಸಿರುವ ಯೋಜನೆ. ಇದರ ರಕ್ಷಣೆಯೂ ನಿಮ್ಮದೇ ಎಂದು ಜನರಲ್ಲಿ ವಿನಂತಿಸಿಕೊಂಡಿದ್ದರು. 

ದಕ್ಷಿಣ ಭಾರತದ ಮೊದಲನೇ ಪ್ರವೇಶ ಹಾಗೂ ನಿರ್ಗಮನ ನಿರ್ಬಂಧಿತ ಹೆದ್ದಾರಿಯಲ್ಲಿ ಯಾರೂ ಒಳ ಪ್ರವೇಶಿಸಬಾರದೆಂಬ ಉದ್ದೇಶದಿಂದ ಎರಡೂ ಕಡೆಗಳಲ್ಲಿ ಬೇಲಿ ಅಳವಡಿಸಿದ್ದೇವೆ. ಅವನ್ನು ತುಂಡರಿಸಿ ಕೊಂಡೊಯ್ಯುತ್ತಿರುವುದು ನಾಚಿಕೆಗೇಡಿನ ವಿಚಾರ. ಮನೆಯಲ್ಲಿರುವ ಅನಗತ್ಯ ವಸ್ತುಗಳನ್ನು ಗುಜರಿಗೆ ಹಾಕಿ. ಅದು ಬಿಟ್ಟು ಸಾರ್ವಜನಿಕರ ಆಸ್ತಿಗೆ ತೊಂದರೆ ನೀಡಬೇಡಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ