ಗದುಗಿನ ಮಠಕ್ಕೆ ಡಾ. ಸಿದ್ದರಾಮ ಸ್ವಾಮೀಜಿ ನೇಮಕ

ಭಾನುವಾರ, 21 ಅಕ್ಟೋಬರ್ 2018 (15:48 IST)
ಗದಗಿನ ತೋಂಟದಾರ್ಯ ಮಠಕ್ಕೆ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ 9ನೇ ಪೀಠಾದಿಪತಿಯಾದ ಡಾ.ಸಿದ್ದರಾಮ ಸ್ವಾಮಿಜಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಡಿಸೆಂಬರ್ 12, 1958ರಲ್ಲಿ ಜಂಗಮ ಸಮಾಜದ ತಂದೆ ರುದ್ರಯ್ಯ, ತಾಯಿ ಶಾಂತಮ್ಮಳ ಉದರದಲ್ಲಿ ಜನಿಸಿದ ಬಾಲಕ ಗುರುಪಾದಯ್ಯ. ಗಂಗಮ್ಮನ ಮನೆಯಲ್ಲಿ ಬೆಳೆದ ಪುಟ್ಟ ಬಾಲಕ ಮುಂದೆ ಬಿಳಗಿಯ ಕಲ್ಮಠದ ಶಾಖಾ ಮಠಕ್ಕೆ ಪೀಠಾಧಿಪತಿಯಾಗಿ ನೇಮಕಗೊಂಡರು. ಅದಾದ ಬಳಿಕ ಬನಾರಸ್ ವಿವಿಯಲ್ಲಿ ಎಂ.ಎ. ಹಿಂದಿ, ಸಂಸ್ಕೃತ ಹಾಗೂ ತತ್ವಶಾಸ್ತ್ರ ಉನ್ನತ ವ್ಯಾಸಾಂಗ ಪಡೆದುಕೊಂಡರು. ಅದಾದ ನಂತರ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ 1994ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡರು.

ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳ ಉತ್ತರಾಧಿಕಾರಿಯಾಗಿ ಇಡೀ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಹಿಂದಿನ ಮಠಾಧೀಶರ ಎಲ್ಲಾ ಕೆಲಸವನ್ನು ಮುಂದುವೆಸಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ಹಲವು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೃತ ಯುಗಿ ವಿನೋಬ, ಇಷ್ಟಲಿಂಗ ಪೂಜಾ ವಿಧಾನ, ಧರ್ಮ ಜ್ಯೋತಿ, ಚಿಂತನ, ವಚನಾರ್ಥ ಚಿಂತನ, ಇಸ್ಲಾಂ ಧರ್ಮ ಸಂದೇಶ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಇನ್ನು 
ಇವರು ನಾಗನೂರು ರುದ್ರಾಕ್ಷಿ ಮಠದ 9ನೇ ಪೀಠಾಧಿಪತಿಯಾಗಿ ನೇಮಕಗೊಂಡ ನಂತರ 7 ದಶಕಗಳ ದಾಸೋಹ ಚಟುವಟಿಕೆಯನ್ನು ಮುಂದುವರೆಸಿಕೊಂಡು ಹೊರಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮಠವನ್ನು ಬೆಳೆಸುವುದರ ಜತೆಗೆ ಪ್ರಾಥಮಿಕ ಶಿಕ್ಷಣದಿಂದ ಇಂಜಿನಿಯರಿಂಗ್ ಕಾಲೇಜು ವರೆಗೆ ವ್ಯಾಸಾಂಗ ಸೌಲಭ್ಯ ಕಲ್ಪಿಸಿದ್ದಾರೆ. 1990ರಲ್ಲಿ ಲಿಂಗಾಯತ್ ಅಧ್ಯಯನ ಅಕಾಡೆಮಿ ಸ್ಥಾಪಿಸಿ 85 ಕ್ಕೂ ಅಧಿಕ ಗ್ರಂಥ ಪ್ರಕಟಿಸಿದ್ದಾರೆ. 1995ರಲ್ಲಿ ಮಠದಲ್ಲಿಯೇ ಸಂಶೋಧನಾ ಕೇಂದ್ರ ಗ್ರಂಥಾಲಯ ಸ್ಥಾಪಿಸಿ ಧರ್ಮ, ಸಾಹಿತ್ಯ, ಸಂಸ್ಕೃತಿ ಸಂಬಂಧಿಸಿದ 16ಕ್ಕೂ ಅಧಿಕ ಗ್ರಂಥಗಳನ್ನು ಹೊರ ತಂದಿದ್ದಾರೆ. 1 ಸಾವಿರ ಕ್ಕೂ ಹೆಚ್ಚು ಹಸ್ತ ಪ್ರತಿಗಳನ್ನು ಸಂಗ್ರಹಿಸಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ