ಸಿದ್ದರಾಮಯ್ಯ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದಾಯ್ತು.. ಮೋದಿ ವಾಣಿಜ್ಯ ಬ್ಯಾಂಕ್`ಗಳ ಸಾಲಮನ್ನಾ ಮಾಡ್ತಾರಾ..?

ಬುಧವಾರ, 21 ಜೂನ್ 2017 (16:23 IST)
ಸಿಎಂ ಸಿದ್ದರಾಮಯ್ಯ ಕೊನೆಗೂ ರೈತರ ಸಂಕಷ್ಟಕ್ಕೆ  50,000 ರೂ. ವರೆಗಿನ ಸಹಕಾರಿ ಬ್ಯಾಂಕ್`ಗಳಲ್ಲಿ ರೈತರು ಮಾಡಿರುವ ಸಾಲಮನ್ನಾ ಮಾಡಿ ವಿಧಾನಸಭೆಯಲ್ಲಿ ಆದೇಶಿಸಿದ್ದಾರೆ. 22 ಲಕ್ಷಕ್ಕೂ ಅಧಿಕ ಜನರಿಗೆ ಇದರಿಂದ ಅನುಕೂಲವಾಗಲಿದೆ. ಇದೀಗ, ಸಾಲಮನ್ನಾದ ಚೆಂಡು ನೇರ ಪ್ರಧಾನಮಂತ್ರಿ ಅಂಗಳಕ್ಕೆ ತಲುಪಿದೆ.

ಹೌದು, ಕೇಂದ್ರ ಸರ್ಕಾರ ಸಾಲಮನ್ನಾ ನೆರವು ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಕೇಳಿದಾಗಲೆಲ್ಲ ಮೊದಲು ಸಹಕಾರಿ ಬ್ಯಾಂಕ್ ಸಾಲಮಾಡಿ ಬಳಿಕ ಕೇಂದ್ರ ಸರ್ಕಾರವನ್ನ ಕೇಳಿ ಎಂದು ವಿಪಕ್ಷ ಬಿಜೆಪಿ ಮುಖಂಡರು ಹೇಳುತ್ತಿದ್ದರು. ಈಗ ರಾಜ್ಯಸರ್ಕಾರ ಸಹಕಾರಿ ಬ್ಯಾಂಕ್`ಗಳ 8165 ಕೋಟಿ ರೂ. ಸಾಲ ಮನ್ನಾ ಮಾಡಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದ ರೈತರ ವಾಣಿಜ್ಯ ಬ್ಯಾಂಕ್`ಗಳಲ್ಲಿರುವ 42,000 ಕೋಟಿ ರೂ. ಸಾಲಮನ್ನಾ ಮಾಡಬೇಕೆಂಬ ಕೂಗಿ ಕೇಳಿಬರುತ್ತಿದೆ.

ಸಾಲಮನ್ನಾ ಮಾಡಿದ ಕೂಡಲೇ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರ ಮುಂದೆ ಹಕ್ಕೊತ್ತಾಯ ಮಾಡಿದ್ದು, ವಾಣಿಜ್ಯ ಬ್ಯಾಂಕ್`ಗಳ ಸಾಲ ಮನ್ನಾ ಮಾಡಿಸಿ ಎಂದು ಒತ್ತಾಯಿಸಿದ್ದಾರೆ. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಕೆ.ಎಸ್. ಪುಟ್ಟಣ್ಣಯ್ಯ ಸಹ ರಾಜ್ಯದ ಬಿಜೆಪಿ ಮುಖಂಡರು ಕೇಂದ್ರದ ಮೇಲೆ ಒತ್ತಡ ತಂದು ವಾಣಿಜ್ಯ ಬ್ಯಾಂಕ್`ಗಳ ಸಾಲಮನ್ನಾ ಮಾಡಿಸಬೇಕೆಂದು ಆಗ್ರಹಿಸಿದ್ದಾರೆ. ವಾಣಿಜ್ಯ ಬ್ಯಾಂಕ್`ಗಳ ಸಾಲಮನ್ನಾ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸಹ ಮೋದಿಗೆ ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ