ಟೋಲ್​ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಮಂಗಳವಾರ, 6 ಜೂನ್ 2023 (17:24 IST)
ಟೋಲ್​ ಪಡೆಯುವ ವಿಚಾರಕ್ಕೆ ಸಿಬ್ಬಂದಿ ಹಾಗೂ ಯುವಕರ ನಡುವೆ ಗಲಾಟೆ ನಡೆದಿದ್ದು ಈ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ರಾಮನಗರ ‌ತಾಲೂಕಿನ ಶೇಷಗಿರಿಹಳ್ಳಿ‌ ಟೋಲ್ ಪ್ಲಾಜಾ ಬಳಿ ಟೋಲ್​ ಪಡೆಯುವ ವಿಚಾರಕ್ಕೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಮಾರಾಮಾರಿಯಾಗಿತ್ತು. ಇದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ಯುವಕರು ಟೋಲ್​ನಲ್ಲಿ ಕೆಲಸ ಮಾಡ್ತಿದ್ದ ಪವನ್​ಕುಮಾರ್​ ಹತ್ಯೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಕರಿಕಲ್ ತಾಂಡ್ಯ ನಿವಾಸಿ ಪವನ್​​ಕುಮಾರ್ ಕೆಲಸ ಮುಗಿಸಿ ಊಟಕ್ಕೆ ಹೋಗಿದ್ದಾಗ ಪವನ್ ‌ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಟೋಲ್​ನಿಂದ ಹಿಂಬಾಲಿಸಿಕೊಂಡು ಬಂದು ದುಷ್ಕರ್ಮಿಗಳು ಪವನ್​​ ಹತ್ಯೆಗೈದಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಟೋಲ್ ಬಳಿ ಗಲಾಟೆ ನಡೆದಿತ್ತು. ಬಳಿಕ ರಾತ್ರಿ 12 ಗಂಟೆಗೆ ಕೆಲಸ ಮುಗಿಸಿಕೊಂಡು ಊಟಕ್ಕೆಂದು ಪವನ್ ಹೊರಟಿದ್ದ. ಈ ವೇಳೆ ಪವನ್​ನನ್ನು ಹಿಂಬಾಲಿಸಿದ ಯುವಕರು ಆತನ ಮೇಲೆ ಹಾಕಿ ಸ್ಟಿಕ್​ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ಆರೋಪಿಗಳಿಗಾಗಿ ಬಿಡದಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ