ಮೀನುಗಾರರ ಕಾರ್ಯಕ್ರಮಕ್ಕೆ ಚಾಲನೆ

ಶುಕ್ರವಾರ, 9 ಜುಲೈ 2021 (18:34 IST)
ಮಂಗಳೂರಿನ ಬೆಂಗರೆಯಲ್ಲಿ ಸಾಗರ ಮಾಲಾ, ಕೋಸ್ಟಲ್ ಬರ್ತ್ ಯೋಜನೆಯ ವಿರುದ್ದ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ನೇತೃತ್ವದಲ್ಲಿ ದೋಣಿಯೊಂದಿಗೆ ಮೀನುಗಾರರ ಪ್ರತಿಭಟನೆ ನಡೆಯಿತು. ಇದೇ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ 
ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಾಗರ ಮಾಲಾ ಯೋಜನೆ ಮೀನುಗಾರರ ಭವಿಷ್ಯವನ್ನು ಕರಾಳಗೊಳಿಸುತ್ತಿದೆ. ಕಾರವಾರದಿಂದ ಮಂಗಳೂರುವರಗೆ  ಜಾರಿಗೊಳ್ಳುತ್ತಿರುವ ಸಾಗರ ಮಾಲಾ ಯೋಜನೆಯ ಪ್ರಾಜೆಕ್ಟ್ ಗಳು ಸ್ಥಳೀಯ ಮೀ‌ನುಗಾರರ ದುಡಿಮೆಯ ಅವಕಾಶಗಳನ್ನು ನಾಶಗೊಳಿಸುತ್ತಿರುವುದು ಯೋಜನೆ ಜಾರಿಯ ಆರಂಭದ ದಿನಗಳಲ್ಲೆ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇದು ಮೀನುಗಾರಿಕೆ ಉದ್ಯಮವನ್ನು ಸಾಂಪ್ರದಾಯಿಕವಾಗಿ ಮೀನುಗಾರಿಕೆಯನ್ನೇ ಅವಲಂಬಿಸಿರುವ ಸಮುದಾಯಗಳಿಂದ ಕಿತ್ತುಕೊಂಡು, ಕಾರ್ಪೊರೇಟ್ ಕಂಪೆನಿಗಳ ಪಾಲಾಗಿಸುವ ಹುನ್ನಾರವನ್ನು ಹೊಂದಿದೆ ಎಂದರು.
ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ದೊರೆತ ನಂತರ ಬೆಂಗರೆ, ತಣ್ಣೀರುಬಾವಿ ಪ್ರದೇಶದ ಸಾಂಪ್ರದಾಯಿಕ ಮೀನುಗಾರರು ಹಾಗೂ ಅವರ ಕುಟುಂಬಸ್ಥರು ತಮ್ಮ ದೋಣಿಗಳ ಮೇಲೆ, ಮನೆಗಳ ಮುಂಭಾಗ ತಮ್ಮ ಬೇಡಿಕೆಗಳ ಪ್ಲೇ ಕಾರ್ಡ್ ಹಿಡಿದು, ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.  ನೂರಾರು ಸಂಖ್ಯೆಯಲ್ಲಿ ಮೀನುಗಾರ ಕುಟುಂಬಗಳು ಈ ವಿಶಿಷ್ಟ ರೀತಿಯ ಪ್ರತಿಭಟನೆಯಲ್ಲಿ ಭಾಗವಹಿಸಿ ಸರಕಾರದ ಗಮನ ಸೆಳೆಯಲು ಯತ್ನಿಸಿದರು. 
ಈ ಪ್ರತಿಭಟನೆಯಲ್ಲಿ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷ ಅಬ್ದುಲ್ ತಯ್ಯೂಬ್, ಸಲಹೆಗಾರ ನೌಷದ್ ಬೆಂಗರೆ, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಹನೀಫ್ ಬೆಂಗರೆ, ಮೀನುಗಾರ ಮುಖಂಡರಾದ ಅನ್ವರ್ ಬೆಂಗರೆ ಮತ್ತಿತರರು ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ