ಗಾಲಿ ಜನಾರ್ಧನ ರೆಡ್ಡಿ ಬಿಜೆಪಿ ಸದಸ್ಯರಲ್ಲ: ಶೋಭಾ ಕರಂದ್ಲಾಜೆ

ಶನಿವಾರ, 10 ಡಿಸೆಂಬರ್ 2016 (16:50 IST)
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಬಿಜೆಪಿ ಸದಸ್ಯರಲ್ಲ. ಅವರನ್ನು ಪಕ್ಷ ಅಮಾನತು ಮಾಡಿದೆ. ಅವರ ವಿರುದ್ಧ ತನಿಖೆ ನಡೆಸಬೇಡಿ ಎಂದು ಯಾರು ಹೇಳಿಲ್ಲ. ಅವರ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. 
 
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ಭೂಸ್ವಾಧೀನ ಅಧಿಕಾರಿ ಭೀಮಾನಾಯಕ್ ಕಾರು ಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಯಾವ ತನಿಖೆ ಬೇಕಾದರೂ ಮಾಡಲಿ. ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯೆಗೆ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯಗೆ ಗಂಭೀರತೆ ಇಲ್ಲ. ಅವರು ಮೊದಲು ಕಾಟಾಚಾರದ ಸಭೆ ನಡೆಸುವುದನ್ನು ನಿಲ್ಲಿಸಲಿ. ಸಿಎಂ ಕರೆದ ಸಭೆಯಲ್ಲಿ ಅವರೇ ಅರ್ಧ ಗಂಟೆ ತಡವಾಗಿ ಬಂದು ತರತುರಿಯಲ್ಲಿ ಸಭೆ ನಡೆಸುತ್ತಾರೆ ಎಂದು ದೂರಿದರು.
 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯ ಸರಕಾರದ ಭ್ರಷ್ಟಾಚಾರದ ಕುರಿತು ಹೇಳಿದಾಗ ಸಿಎಂ ಸಿದ್ದರಾಮಯ್ಯ ಕೋಪಿಸಿಕೊಂಡಿದ್ದರು. ಆದರೆ, ಬ್ರಹ್ಮಾಂಡ ಭ್ರಷ್ಟಾಚಾರದ ಚಿಕ್ಕರಾಯಪ್ಪ ಯಾರು? ಅವರು ಸಿಎಂ ಸಿದ್ದರಾಮಯ್ಯಗೆ ಎಷ್ಟು ಆಪ್ತರೆಂದು ರಾಜ್ಯದ ಜನತೆಗೆ ಗೊತ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ