ಮದುವೆಗೆ ನಿರಾಕರಿಸಿದ ಯುವತಿಯನ್ನ ಚಾಕುವಿನಿಂದ ಚುಚ್ಚಿ ಕೊಂದ ಪಾಗಲ್ ಪ್ರೇಮಿ

ಮಂಗಳವಾರ, 11 ಏಪ್ರಿಲ್ 2017 (15:23 IST)
ಮದುವೆಗೆ ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ದೀಪಾಂಜಲಿನಗರದಲ್ಲಿ ನಡೆದಿದೆ. ಹತ್ಯೆಯಾದ ಯುವತಿಯನ್ನ ಶೋಭಾ ಎಂದು ಗುರ್ತಿಸಲಾಗಿದೆ.

ತನ್ನನ್ನ ಮದುವೆಯಾಗುವಂತೆ ಶೋಭಾಳನ್ನ ಪೀಡಿಸುತ್ತಿದ್ದ ಪಕ್ಕದ ಮನೆಯ ಗಿರೀಶ್ ಎಂಬಾತ ಇವತ್ತು ಸಹ ಜಗಳ ತೆಗೆದಿದ್ದಾನೆ. ಯುವತಿ ನಿರಾಕರಿಸಿದಾಗ ಚಾಕುವಿನಿಂದ ಇರಿದಿದ್ದಾನೆ. ತಡೆಯಲು ಬಂದ ಪಕ್ಕದ ಮನೆಯ ವಿಜಯಮ್ಮ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಶೋಭಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ಎಂಬಿಎ ಪದವಿಧರೆಯಾಗಿದ್ದ ಶೋಭಾಗೆ ಅಪ್ಪ-ಅಮ್ಮ ಇರಲಿಲ್ಲ. ಟ್ಯೂಶನ್ ಮಾಡಿ ಜೀವನ ಸಾಗಿಸುತ್ತಿದ್ದಳೆಂದು ತಿಳಿದುಬಂದಿದೆ.

2 ಮಕ್ಕಳ ತಂದೆಯಾಗಿದ್ದರೂ ಗಿರೀಶ್ ಶೋಭಾ ಮೇಲೆ ಮೋಹ ಬೆಳೆಸಿಕೊಂಡಿದ್ದ. ಅಪ್ಪ-ಅಮ್ಮ ಯಾರೂ ಇಲ್ಲ ಎಂಬುದನ್ನೇ ಅವಕಾಶವಾಗಿ ತೆಗೆದುಕೊಂಡಿದ್ದ ಗಿರೀಶ್ ಇನ್ನಿಲ್ಲದಂತೆ ಪೀಡಿಸಿದ್ದ. ಪಾಪ ಅನಾಥ ಯುವತಿಯನ್ನ ಇವತ್ತು ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾನೆ. ತಲೆಮರೆಸಿಕೊಂಡಿರುವ ಕೊಲೆಗಡುಕ ಗಿರೀಶ್`ಗಾಗಿ ಬ್ಯಾಟರಾಯನಪುರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ