ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

Sampriya

ಭಾನುವಾರ, 22 ಜೂನ್ 2025 (12:29 IST)
Photo Credit X
ಶಿವಮೊಗ್ಗ: ಯುವಕರಿಬ್ಬರು ಶಿವಮೊಗ್ಗ ತಾಲ್ಲೂಕಿನ ಯಡವಾಲದಲ್ಲಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆಯಿದೆ.

ಸ್ನೇಹಿತನ ತೋಟದ ಮನೆಯಲ್ಲಿ ಪಾರ್ಟಿ ನಡೆಸಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಯಡವಾಲ ಗ್ರಾಮದ ಕುಮಾರನಾಯ್ಜ ಅವರ ಪುತ್ರ, ಬಿ.ಕಾಂ ಓದುತ್ತಿದ್ದ ಗೌತಮ್ (22) ಹಾಗೂ ಶಿವಮೊಗ್ಗದ ಕುಂಬಾರಗುಂಡಿ ಚೌಡಮ್ಮನ ದೇವಸ್ಥಾನ ಸಮೀಪದ ನಿವಾಸಿ ವಿಜಯ್ ಅವರ ಪುತ್ರ ಚಿರಂಜೀವಿ (22) ಮೃತರು.

ಗೌತಮ್ ಸಹೋದರಿಗೆ ಹೆರಿಗೆ ಆಗಿದ್ದು, ತಾಯಿ-ಮಗುವನ್ನು ನೋಡಲು ಚಿರಂಜೀವಿ ಸೇರಿದಂತೆ ಎಂಟು ಮಂದಿ ಶಿವಮೊಗ್ಗದ ಸೀಗೆಹಟ್ಟಿಯಿಂದ ಯಡವಾಲಕ್ಕೆ ಸಂಜೆ ಬೈಕ್ ನಲ್ಲಿ ತೆರಳಿದ್ದರು. ನಂತರ ಎಲ್ಲರೂ ಗೌತಮ್ ಅವರ ಯಡವಾಲದ ತೋಟದ ಮನೆಗೆ ಪಾರ್ಟಿ ಮಾಡಲು ತೆರಳಿದ್ದರು.

ಅಲ್ಲಿಯೇ ಅಡುಗೆ ಮಾಡಿ ಪಾನಗೋಷ್ಠಿ ಕೂಡ ನಡೆಸಿದ್ದರು. ಈ ವೇಳೆ ಚಿರಂಜೀವಿ ಬಹಿರ್ದೆಸೆಗೆ ಹೋಗಲು ಮುಂದಾಗಿದ್ದು, ಆತನನ್ನು ಗೌತಮ್ ಕರೆದೊಯ್ದಿದ್ದಾನೆ. ಪಕ್ಕದಲ್ಲಿ ಗೌತಮ್ ಚಿಕ್ಕಪ್ಪನ ಜಮೀನಿನಲ್ಲಿದ್ದ ಕೃಷಿ ಹೊಂಡದಿಂದ ನೀರು ತೆಗೆದುಕೊಳ್ಳುವಾಗ ಚಿರಂಜೀವಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ಗೌತಮ್ ಕೂಡ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ.

ಇಂದು ಮೃತದೇಹಗಳನ್ನು ಕೃಷಿ ಹೊಂಡದಿಂದ ಮೇಲೆ ತೆಗೆಯಲಾಗಿದೆ. ‌ಯುವಕರ ಕುಟುಂಬದವರ ರೋದನೆ ಮುಗಿಲುಮುಟ್ಟಿತ್ತು. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ