ಸಿಎಂ ರಾಜೀನಾಮೆ ಕೊಟ್ಟು ಕ್ಷಮೆ ಕೇಳಲಿ: ಗೋವಿಂದ ಕಾರಜೋಳ

Krishnaveni K

ಶನಿವಾರ, 7 ಜೂನ್ 2025 (17:20 IST)
ಬೆಂಗಳೂರು: ಆರ್ಥಿಕ ಅಪರಾಧ ಇರುವವರ ಕಂಪನಿಗಳನ್ನು ಕರ್ನಾಟಕ ಸರಕಾರ ತಲೆ ಮೇಲೆ ಹೊತ್ತುಕೊಂಡು ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಟೀಕಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್‍ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 11 ಜನ ಸತ್ತಿದ್ದು, ಈ ದುರ್ಘಟನೆಗೆ ಸಿದ್ದರಾಮಯ್ಯನವರ ಸರ್ಕಾರ ನೇರ ಹೊಣೆ. ಆದ್ದರಿಂದ ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.

ಹಿಂದಿನ ಸರಕಾರ ಈ ಆರ್ಥಿಕ ಅಪರಾಧಿ ಕಂಪನಿಗಳ ಸಂಭ್ರಮಾಚಾರಣೆಗೆ ಮುಂದಾಗಿಲ್ಲ ಹಾಗೂ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿಲ್ಲ. ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿರುವಂತದ್ದು ಸಿದ್ದರಾಮಯ್ಯನವರ ಸರ್ಕಾರ ಎಂದು ಟೀಕಿಸಿದರು. ಮೊನ್ನೆ ಬೆಂಗಳೂರಿನಲ್ಲಿ ನಡೆದ ದುರಂತಕ್ಕೆ ನೇರವಾಗಿ ಕರ್ನಾಟಕ ಸರ್ಕಾರವೇ ಹೊಣೆಗಾರ ಎಂದು ಆರೋಪಿಸಿದರು. 
ದೇಶದ ಇಬ್ಬರು ಆರ್ಥಿಕ ಅಪರಾಧಿಗಳಿಗೆ ಸಂಬಂಧಿಸಿದ ಕಂಪನಿಗಳಲ್ಲಿ ಒಂದನೇಯದ್ದು ಆರ್‍ಸಿಬಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’. ಇದು ವಿಸ್ಕಿ ಮಾರಾಟಕ್ಕಾಗಿ ಹುಟ್ಟಿಕೊಂಡ ವಿಜಯ್ ಮಲ್ಯರವರ ಒಂದು ಕಂಪನಿ. ಎರಡನೇಯದ್ದು ‘ಐಪಿಎಲ್’ ಲಲಿತ್ ಮೋದಿಯವರದ್ದು. ಇವರು ಕೂಡ ದೇಶದ ಆರ್ಥಿಕ ಅಪರಾಧಿ. ಇಬ್ಬರು ಆರ್ಥಿಕ ಅಪರಾಧಿಗಳು ಅಪರಾಧವನ್ನು ಮಾಡಿ ದೇಶದ ಖಜಾನೆಗೆ ಕನ್ನ ಹಾಕಿ ದೇಶ ಬಿಟ್ಟು ಹೋದವರು ಎಂದು ಅವರು ಟೀಕಿಸಿದರು. 

ಯಾವ ಕಾರಣಕ್ಕಾಗಿ ವಿಜಯ ಮಲ್ಯ ಅವರ ಆರ್.ಸಿ.ಬಿ. ಕಂಪನಿ ಮತ್ತು ಲಲಿತ್ ಮೋದಿಯವರ ಐಪಿಎಲ್ ಕಂಪನಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದೀರಿ ಎಂಬುದನ್ನು ಈ ದೇಶದ ಜನತೆ ಮತ್ತ ನಾಡಿನ ಜನತೆ ತಿಳಿಸಬೇಕಾಗಿತ್ತು ಎಂದು ತಿಳಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ