ಪೊಲೀಸ್ ಠಾಣೆ ಮೆಟ್ಟಿಲೇರಿದ ಇಲಿ-ಹೆಗ್ಗಣ ಜಗಳ

ಸೋಮವಾರ, 6 ಫೆಬ್ರವರಿ 2017 (08:20 IST)
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗುತ್ತಿದೆ. ಕೆಲ ಜನಪ್ರತಿನಿಧಿಗಳಿಗಂತೂ ಇವು ಆರೋಪ-ಪ್ರತ್ಯಾಪರೋಪಗಳನ್ನು ಮಾಡಿಕೊಳ್ಳಲಿರುವ ಮಾಧ್ಯಮಗಳಾಗಿ ಬದಲಾಗಿವೆ. ಅದಕ್ಕೊಂದು ಸ್ಪಷ್ಟ ನಿದರ್ಶನ ಮೈಸೂರಿನಲ್ಲಿ ನಡೆದಿರುವ ಈ ಪ್ರಕರಣ.
ಸಾಮಾಜಿಕ ಜಾಲತಾಣ ಫೇಸ್‌ಬುಕ್ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಮೈಸೂರು ಗ್ರಾಮೀಣ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
 
ಅಷ್ಟಕ್ಕೂ ನಡೆದಿದ್ದೇನು: ಶ್ರೀರಾಂಪುರ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಉಷಾ ಎನ್ನುವವರು, "ಅಧ್ಯಕ್ಷರಿಗೆ ಕೆಲಸ ಮಾಡೋಕ್ಕಿಂತ ದುಡ್ಡ ಮಾಡೋದೆ ಕೆಲಸ. ಅವರ ಟಾರ್ಗೆಟ್ ಮುಟ್ಟಬೇಕಲ್ಲ, ಅದಕ್ಕೆ ಟಾರ್ಗೆಟ್ ಕಡೆ ಗಮನ", ಎಂದು ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದರು. ಇದನ್ನು ಕಂಡ ಪಂಚಾಯತ್ ಅಧ್ಯಕ್ಷೆ ಚೂಡಾಮಣಿ ಸುಮ್ಮನಾಗಲಿಲ್ಲ. 'ಬೇರೆಯವರ ತಟ್ಟೆಯಲ್ಲಿ ಇಲಿ ಹುಡುಕೋ ಬದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ನೋಡಿಕೊಳ್ಳಿ', ಎಂದು ನೇರಾನೇರವಾಗಿ ಉಷಾ ಅವರಿಗೆ ಟಾಂಗ್ ನೀಡಿದ ಅವರು, ಸುಳ್ಳು ಆರೋಪ ಮಾಡಿ ನನ್ನ ತೇಜೋವಧೆ ಮಾಡಿದ್ದಾರೆ, ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.  
 
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸಬ್ ಇನ್ಸಪೆಕ್ಟರ್ ಜಯಪ್ರಕಾಶ್ ತನಿಖೆಯನ್ನು ಆರಂಭಿಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಉಷಾ, ಈ ತಪ್ಪು ಆಗಬಾರದಿತ್ತು, ಆದರೆ ಆಗಿ ಹೋಗಿದೆ. ಈಗಾಗಲೇ ಕ್ಷಮೆಯಾಚಿಸಿದ್ದೇನೆ. ಮಾತುಕತೆ ಮೂಲಕ ವಿವಾದವನ್ನು ಬಗೆ ಹರಿಸಿಕೊಳ್ಳುವುದಾಗಿ ಹೇಳಿದ್ದಾರೆ.
 
ಜನಪ್ರತಿನಿಧಿಗಳ ಈ ಫೇಸ್‌ಬುಕ್ ಜಗಳದಿಂದ ಸಾರ್ವಜನಿಕರಿಗೆ ಪುಕ್ಕಟ್ಟೆ ಮನರಂಜನೆ ಸಿಕ್ಕಂತಾಗಿದೆ. 
 

ವೆಬ್ದುನಿಯಾವನ್ನು ಓದಿ