ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

Krishnaveni K

ಶನಿವಾರ, 28 ಜೂನ್ 2025 (17:09 IST)
ಬೆಂಗಳೂರು: ಆರ್ ಎಸ್ ಎಸ್ ನ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದ ವಿಚಾರವಾಗಿ ಮಾತನಾಡಿರುವುದನ್ನು ನಾವು ಖಂಡಿಸುತ್ತೇವೆ. ಈ ವಿಚಾರವಾಗಿ ಹೋರಾಟ ನಡೆಸಲು ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದೇವೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್ಎಂ ರೇವಣ್ಣ ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಆರ್ ಎಸ್ ಎಸ್ ಅವರ ಚಿಂತನೆ ಕುತಂತ್ರ ಏನು ಎಂದು ಹಳ್ಳಿ, ಹಳ್ಳಿಗೂ ತಲುಪಿಸುವ ಕೆಲಸವನ್ನು ಮಾಡಲಾಗುವುದು. ಆರ್‌ ಎಸ್ ಎಸ್ ನ ಈ ಹೇಳಿಕೆಯನ್ನು ಕೇಂದ್ರ ಸರ್ಕಾರದ ಮೈತ್ರಿ ಪಕ್ಷಗಳ ಮುಖಂಡರಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರು ಒಪ್ಪುತ್ತಾರೆಯೇ ಎಂದು ಸ್ಪಷ್ಟಪಡಿಸಬೇಕು ಎಂದಿದ್ದಾರೆ.

 ‘ಈ ಆರ್ ಎಸ್ ಎಸ್ ಅವರು ಎಂದಿಗೂ ಸಂವಿಧಾನವನ್ನು ಒಪ್ಪಿದವರಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೇ ಇರುವಂತಹ ಜನರಿವರು. ಆರ್ ಎಸ್ ಎಸ್ ಅವರು ಯಾವಾಗಲೂ ಸಂವಿಧಾನ ವಿರೋಧಿಗಳಾಗಿಯೇ ನಡೆದುಕೊಂಡು ಬಂದವರು. ಅವರಿಗೆ ಯಾವಗೆಲ್ಲಾ ಹಿನ್ನಡೆ ಉಂಟಾಗುತ್ತದೋ ಅಂತಹ ಸಮಯದಲ್ಲಿ ಸಂವಿಧಾನದ ಬಗ್ಗೆ ಮಾತನಾಡುವುದು ಅವರ ಚಾಳಿ.

1952 ರಿಂದಲೂ ಇವರು ಜನರನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ಉದ್ರೇಕಗೊಳಿಸುವ ಕೆಲಸ ಮಾಡುತ್ತಲೇ ಇದ್ದಾರೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಒಗ್ಗಟ್ಟನ್ನು ಒಡೆಯುವ ಕೆಲಸ ಆರ್ ಎಸ್ ಎಸ್ ಮಾಡುತ್ತಿದೆ.

ಇವರಿಗೆ ದೇಶ ಒಗ್ಗಟ್ಟಾಗಿ ಇರಬೇಕೆ ಬೇಡವೇ? ಮತ್ತೆ ಮನುಸ್ಮೃತಿಯನ್ನು ಹೇರುವ ಕೆಲಸ ಮಾಡುವುದೇ ಕೆಲಸವೇ ಎಂಬುದಾಗಿ ಪ್ರಶ್ನಿಸಬೇಕು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ