ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ: ರಾಜಣ್ಣ ಬಾಂಬ್

Krishnaveni K

ಗುರುವಾರ, 26 ಜೂನ್ 2025 (14:17 IST)
Photo Credit: X
ಬೆಂಗಳೂರು: ಸೆಪ್ಟೆಂಬರ್ ವೇಳೆಗೆ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ. ಸಿಎಂ ಸಿದ್ದರಾಮಯ್ಯ ಎಲ್ಲರನ್ನೂ ಕಷ್ಟಪಟ್ಟು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಎಂದು ಸಚಿವ ಕೆಎನ್ ರಾಜಣ್ಣ ಹೇಳಿಕೆ ನೀಡಿರುವುದು ಈಗ ಮತ್ತೊಮ್ಮೆ ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ ಸೃಷ್ಟಿಸಿದೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈಗ ಗಾಳಿ ತಣ್ಣಗೆ ಬೀಸುತ್ತಿದೆ. ಸೆಪ್ಟೆಂಬರ್ ಕಳಿಯಲಿ. ಭಾರೀ ಬದಲಾವಣೆಯಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಈಗ ಮತ್ತೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನಲೆಗೆ ಬರುವಂತೆ ಮಾಡಿದೆ.

ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಮಾಡಿ ಈ ರೀತಿ ಬಹಿರಂಗ ಹೇಳಿಕೆ ನೀಡುವ ಶಾಸಕರಿಗೆ ಕಡಿವಾಣ ಹಾಕಬೇಕು ಎಂದು ಎಚ್ಚರಿಕೆ ಹಾಕಿಸಿಕೊಂಡು ಬಂದಿದ್ದರು. ಇದರ ಬೆನ್ನಲ್ಲೇ ಕೆಎನ್ ರಾಜಣ್ಣ ಈ ರೀತಿ ಬಾಂಬ್ ಸಿಡಿಸಿದ್ದಾರೆ.

2013 ರಲ್ಲಿ ಇದ್ದ ಹಾಗೆ ಸಿದ್ದರಾಮಯ್ಯ ಈಗಿಲ್ಲ. ಆಗ ಒಂದೇ ಪವರ್ ಸೆಂಟರ್ ಇತ್ತು. ಈಗ ಹಲವು ಪವರ್ ಸೆಂಟರ್ ಗಳಿವೆ. ಅದೆಲ್ಲವನ್ನೂ ನಿಭಾಯಿಸಬೇಕಾದ ಒತ್ತಡ ಸಿದ್ದರಾಮಯ್ಯ ಮೇಲಿದೆ ಎಂದು ರಾಜಣ್ಣ ಹೇಳಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಕೂಡಾ ಅಸಹಾಯಕರಾಗಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಆದರೆ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಸರ್ಕಾರದ ಮೇಲೆ ನಿಯಂತ್ರಣ ಕಳೆದುಕೊಂಡಿಲ್ಲ. ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. ಸರ್ಕಾರ ಭದ್ರವಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ