ಈಗ್ಲೆ ಚುನಾವಣೆಯ ಅಖಾಡಕ್ಕಿಳಿದ ಬಿಜೆಪಿ, ಜೆಡಿಎಸ್

ಗುರುವಾರ, 20 ಅಕ್ಟೋಬರ್ 2016 (09:06 IST)

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ವರ್ಷದ ಮೇಲೆ ಮೂರ್ನಾಲ್ಕು ತಿಂಗಳು ಬಾಕಿಯಿವೆ. ಅದಾಗಲೆ ಬಿಜೆಪಿ, ಜೆಡಿಎಸ್ ಚುನಾವಣೆಯ ಪೂರ್ವ ತಯಾರಿಯನ್ನು ಸದ್ದಿಲ್ಲದೆ ಮಾಡಿಕೊಳ್ಳುತ್ತಿವೆ.
 


 

ಪ್ರಹ್ಲಾದ ಜೋಶಿ ಅವರ ಬಿಜೆಪಿ ರಾಜ್ಯಾಧ್ಯಕ್ಷ ಅವಧಿ ಮುಕ್ತಾಯವಾಗುತ್ತಿದ್ದಂತೆ ಹೈಕಮಾಂಡ್ ಮಾಸ್ ಲೀಡರ್ ಎಂದೆನಿಸಿಕೊಂಡಿರುವ ಯಡಿಯೂರಪ್ಪ ಅವರನ್ನು ಆ ಹುದ್ದಿಗೆ ತಂದು ಕುಳ್ಳಿರಿಸಿತು. ಹುದ್ದೆಯಲಂಕರಿಸಿದ ಯಡಿಯೂರಪ್ಪ ವಾರದೊಳಗೆ ಬಿಜೆಪಿಯ ಎಲ್ಲ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಿದರು. ಇದು ರಾಜ್ಯ ಬಿಜೆಪಿಯ ಮುಂಬರುವ ಚುನಾವಣೆಯ ಮೊದಲ ಹೆಜ್ಜೆಯಾಗಿತ್ತು. ಯಡಿಯೂರಪ್ಪರ ದಿಢೀರ ನಿರ್ಧಾರದಿಂದ ಕೆ.ಎಸ್. ಈಶ್ವರಪ್ಪ ತುಸು ಅಸಮಾಧಾನಗೊಂಡರೂ ಅಷ್ಟಕ್ಕೆ ಸುಮ್ಮನಾಗಿದ್ದರು. ನಂತರ ರಾಯಣ್ಣ ಬ್ರಿಗೇಡ್ ಎನ್ನುವ ಹಿಂದುಳಿದ ಸಂಘಟನೆ ಕಟ್ಟಿಕೊಂಡು, ಹಾವೇರಿಯಲ್ಲಿ ಸಮಾವೇಶ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದರು. ಇದು ಯಡಿಯೂರಪ್ಪ ಸೇರಿದಂತೆ ರಾಷ್ಟ್ರ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ರಾಮಲಾಲ್ ನೇತೃತ್ವದಲ್ಲಿ ಯಡಿಯೂರಪ್ಪ-ಈಶ್ವರಪ್ಪ ಇಬ್ಬರನ್ನು ಒಂದಾಗಿ ಮಾಡಿ, ಒಗ್ಗಟ್ಟಿನಲ್ಲಿ ಮುಂಬರುವ ಚುನಾವಣೆ ಎದುರಿಸಬೇಕೆಂದು ಬಿಜೆಪಿ ವರಿಷ್ಠರು ತಾಕೀತು ಮಾಡಿದರು.

 

ನಂತರದ ಬಿಜೆಪಿಯ ಚುನಾವಣಾ ಪೂರ್ವ ತಯಾರಿಯೇ ರಾಜ್ಯಾದ್ಯಂತ ಪ್ರತಿಭಟನೆ. ರಾಜ್ಯ ಸರಕಾರದ ಒಂದಿಲ್ಲೊಂದು ಹುಳುಕುಗಳನ್ನು ತೆಗೆದುಕೊಂಡು, ಆಡಳಿತದಲ್ಲಿ ಅದರ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಪ್ರಾಮಾಣಿಕ ಅಧಿಕಾರಿಗಳ ರಾಜೀನಾಮೆ, ಆತ್ಮಹತ್ಯೆ ಪರ್ವ, ಸರಕಾರಿ ನೌಕರರ ಪ್ರತಿಭಟನೆ, ಅನುದಾನ ಹಂಚಿಕೆಯಲ್ಲಿಯ ತಾರತಮ್ಯ ಹೀಗೆ ಸದಾ ಒಂದಿಲ್ಲೊಂದು ವಿಷಯವನ್ನು ಮುಂದಿಟ್ಟುಕೊಂಡು ಪ್ರತಿದಿನ ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸುತ್ತಿದೆ. ನಾಲ್ಕೈದು ದಿನಗಳ ಹಿಂದಿನಿಂದ ಆರ್.ಎಸ್.ಎಸ್. ಕಾರ್ಯಕರ್ತರ ಹತ್ಯೆ ಮುಂದಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವ ಸರಕಾರದ ವೈಫಲ್ಯವನ್ನು ಜನತೆಯ ಮುಂದಿಡುತ್ತ, ರುದ್ರೇಶ್ ಹತ್ಯೆಕೋರರನ್ನು ಬಂಧಿಸದಿದ್ದರೆ ರಾಜ್ಯ ಬಂದ್ ಕರೆ ನೀಡಲಾಗುವುದು ಎಂದು ಕರೆ ನೀಡಿದೆ.
 

ಇನ್ನು ಜೆಡಿಎಸ್. ರಾಜ್ಯದಲ್ಲಿ ಅಧಿಕಾರದ ಆಸೆಯನ್ನೇ ಕಳೆದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ರಾಜಕೀಯ ಬೆಳವಣಿಗೆಗಳು ಪೂರಕವಾಗಿ ಪರಿಣಮಿಸಿದೆ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯ ಸರಕಾರ ಸುಪ್ರಿಂ ಕೋರ್ಟ್ ಗೆ ಸಲ್ಲಿಸಿದ್ದ ಅಫಿಡವೆಟ್, ಮಹದಾಯಿ ಯೋಜನೆ ಅನುಷ್ಠಾನ, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಒದ್ದಾಡುತ್ತಿರುವ ರಾಜ್ಯ ಸರಕಾರ ಅವಸ್ಥೆ, ಹತ್ಯೆಕೋರರನ್ನು ಬಂಧಿಸಲಾಗದೆ ಮೀನಮೇಷ ಎಣಿಸುತ್ತಿರುವ ಪೊಲೀಸ್ ವ್ಯವಸ್ಥೆ ಇವೆಲ್ಲವೂ ಕುಮಾರಸ್ವಾಮಿಗೆ ವರದಾನವಾಗಿದೆ. ಇವನ್ನೆ ಮುಂದಿಟ್ಟುಕೊಂಡು ಜನತೆಯ ಬಳಿ ಹೋಗುತ್ತೇನೆ ಎನ್ನುವ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ಈಗಾಗಲೇ ಹುಬ್ಬಳ್ಳಿಯಲ್ಲಿ ಒಂದು ಮನೆಯನ್ನು ಸಹ ನೋಡಿದ್ದಾರೆ.

 

ವಾರದಲ್ಲಿ ಅಥವಾ ಹದಿನೈದು ದಿನಕ್ಕೊಮ್ಮೆ ಹುಬ್ಬಳ್ಳಿಗೆ ಬಂದು, ಅಲ್ಲಿಯ ಸುತ್ತಮುತ್ತಲಿನ ಪ್ರದೇಶಗಳಿಗೆ ಓಡಾಡಿ ಪಕ್ಷ ಸಂಘಟನೆ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೆ, ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಈಗಾಗಲೇ ಒಂದೆರಡು ಸಭೆಗಳಾಗಿದ್ದು ಶೀಘ್ರದಲ್ಲಿಯೇ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲು ನಿರ್ಧರಿಸಲಾಗಿದೆ. ಇವುಗಳ ನಡುವೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಚುನಾವಣಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನತೆಯನ್ನು ಜಾಗೃತರನ್ನಾಗಿ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದು ಈಗಗಲೇ ಜೆಡಿಎಸ್ ಚುನಾವಣೆಯ ರಣಕಹಳೆ ಊದಿದೆ ಎಂದೇ ಅರ್ಥ.

 

ಆದರೆ ಆಡಳಿತಾರೂಢ ಕಾಂಗ್ರೆಸ್ ಮಾತ್ರ ಅಧಿಕಾರದ ಅಮಲಿನಿಂದ ಇನ್ನೂ ಎಚ್ಚೆತ್ತುಕೊಂಡಿಲ್ಲ. ಈಗಲೂ ಸಚಿವ ಸಂಪುಟಕ್ಕೆ ಸೇರ್ಪಡೆ ಎನ್ನುವ, ನಾಟಕವಾಡುತ್ತ ಅತೃಪ್ತ ಆತ್ಮಗಳ ಸಂತೈಕೆಯಲ್ಲಿಯೇ ಇದೆ. ಸಾಕಷ್ಟು ಆರೋಪ, ಟೀಕೆಗಳನ್ನು ಮೈ ಮೇಲೆ ಹೊದ್ದುಕೊಂಡು ಆಡಳಿತ ನಡೆಸುತ್ತಲೇ ಇದೆಯಾದರೂ, ನಿರೀಕ್ಷಿತ ಮಟ್ಟದಲ್ಲಿ ಹೇಳಿಕೊಳ್ಳುವಂತ ಸಾಧನೆಯೇನೂ ಇಲ್ಲ. ಕೆಲವಷ್ಟು ಭಾಗ್ಯಗಳ ಯೋಜನೆ ಪರಿಚಯಿಸಿದ್ದರೂ, ಪರೋಕ್ಷವಾಗಿ ಅದು ವ್ಯತಿರಿಕ್ತ ಪರಿಣಾಮ ಬೀರಿದ್ದಂತೂ ಸುಳ್ಳಲ್ಲ. ಒಟ್ಟಾರೆ ಮುಂಬರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಹೊರತು ಪಡಿಸಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈಗಲೆ ರಣತಂತ್ರ ಹೂಡುತ್ತ ಅಖಾಡಕ್ಕೆ ಇಳಿದು ಬಿಟ್ಟಿದೆ ಎನ್ನುವುದು ಸತ್ಯ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ