ನೀರಿಗಾಗಿ ಕೆ.ಆರ್.ಪೇಟೆ ಶಾಸಕನ ರೌದ್ರಾವತಾರ....

ಬುಧವಾರ, 19 ಅಕ್ಟೋಬರ್ 2016 (20:15 IST)
ನೀರಿಗಾಗಿ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಇಂಜಿನಿಯರೊಬ್ಬರನ್ನು ಎಳೆದಾಡಿ, ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
 
ರೈತರ ಬೆಳೆಗೆ ಅಗತ್ಯ ನೀರು ಬಿಡದ ಹಿನ್ನೆಲೆಯಲ್ಲಿ ನಾರಾಯಣಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಹೇಮಾವತಿ ಡ್ಯಾಂ ಯೋಜನೆಯ ಇಂಜಿನಿಯರ್ ಕಚೇರಿಗೆ ತೆರಳಿ, ಇಂಜಿನಿಯರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಟೇಬಲ್ ಮೇಲಿದ್ದ ಪುಸ್ತಕಗಳನ್ನು ಚೆಲ್ಲಾಡಿದ್ದಾರೆ. 
 
ನೀರು ಬಿಡುವ ಕುರಿತು ಇಂಜಿನಿಯರ್ ಜೊತೆ ಚರ್ಚಿಸುತ್ತಿದ್ದ ನಾರಾಯಣಗೌಡ ಅವರು ಏಕಾಏಕಿ ಇಂಜಿನಿಯರ್ ಕತ್ತು ಹಿಡಿದು ಎಳೆದಿದ್ದಾರೆ. ಈ ವೇಳೆ ಬೆಂಬಲಿಗರು ವಾತಾವರಣವನ್ನು ತಿಳಿಗೊಳಿಸಿದರು.
 
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ನಾರಾಯಣಗೌಡ, ನಾನು ಇಂಜಿನಿಯರ್ ಮೇಲೆ ಹಲ್ಲೆ ನಡೆಸಿಲ್ಲ. ಬೆಳೆಗಳಿಗೆ ನೀರು ಬಿಡದೇ ಇದ್ದಾಗ ರೈತರು ನನ್ನನ್ನು ಪ್ರಶ್ನಿಸಿದ್ದರು. ರೈತರ ಪರವಾಗಿ ಚರ್ಚಿಸಲು ನಾನು ಕಚೇರಿಗೆ ಹೋಗಿದ್ದೆ. ನೀವೆ ಬನ್ನಿ ರೈತರ ಸ್ಥಿತಿ ನೋಡಿ ಎಂದು ಅವರ ಕೈಹಿಡಿದು ಕರೆತರಲು ಯತ್ನಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ