ಖರ್ಗೆ ಸಾಹೇಬ್ರೇ ನೀವು ರಬ್ಬರ್ ಸ್ಟಾಂಪ್ ಅನ್ನೋದಕ್ಕೆ ಇದಕ್ಕಿಂತ ಬೇಕಾ: ಜೆಡಿಎಸ್ ಲೇವಡಿ
ಡಿಕೆಶಿ ಮತ್ತು ಸಿದ್ದರಾಮಯ್ಯ ಬಣದವರ ಮನವೊಲಿಸಲು ವಿಫಲರಾದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ ಅಸಹಾಯಕತೆ ಪ್ರದರ್ಶಿಸಿದ್ದರು. ನನ್ನ ಕೈಯಲ್ಲಿ ಏನೂ ಇಲ್ಲ, ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದಿದ್ದರು. ಅವರೇ ಎಐಸಿಸಿ ಅಧ್ಯಕ್ಷರಾಗಿದ್ದುಕೊಂಡು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದಿರುವುದು ಈಗ ಭಾರೀ ಟ್ರೋಲ್ ಗೊಳಗಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಖರ್ಗೆ ಸಾಹೇಬ್ರೇ ತಾವು ಕಾಂಗ್ರೆಸ್ ಪಕ್ಷದ ಅಧ್ಯಕ್ಷರೋ, ಉಸ್ತುವಾರಿಯೋ ಎಂದು ಪ್ರಶ್ನೆ ಮಾಡಿದೆ. ಈ ಅಸಹಾಯಕತೆಯ ಮಾತುಗಳಿಂದ ತಿಳಿಯುತ್ತದೆ ಅಧ್ಯಕ್ಷರಾಗಿದ್ದರೂ ನಿಮಗೆ ಚಲಾಯಿಸಲು ಯಾವುದೇ ಅಧಿಕಾರ ಇಲ್ಲ. ತಾವೊಬ್ಬ “ರಬ್ಬರ್ ಸ್ಟಾಂಪ್ ಅಧ್ಯಕ್ಷ” ಎಂಬುದು ಸಾಬೀತಾಗುತ್ತಿದ್ದು, ಜೊತೆಗೆ ಕಾಂಗ್ರೆಸ್ ಪಕ್ಷದ ಗುಲಾಮಿತನವನ್ನು ಜಗಜ್ಜಾಹೀರುಗೊಳಿಸಿದೆ ಎಂದು ವ್ಯಂಗ್ಯ ಮಾಡಿದೆ.