ಕನ್ನಡ ಭಾಷೆಗೆ ಮೊದಲನೇ ಶತ್ರು ಕಂಗ್ಲೀಶ್: ಅನಂತ್ ಕುಮಾರ್

ಮಂಗಳವಾರ, 1 ನವೆಂಬರ್ 2016 (12:56 IST)
ಕನ್ನಡ ಭಾಷೆ ಅತ್ಯಂತ ಸುಂದರವಾದ ಭಾಷೆಯಾಗಿದೆ.ಕನ್ನಡಿಗರು ಒಣಪ್ರತಿಷ್ಠೆಯನ್ನು ಮರೆತು ಶುದ್ಧವಾದ ಕನ್ನಡ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಿದಲ್ಲಿ ಕನ್ನಡ ಭಾಷೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
 
ಬಿಜೆಪಿ ಪಕ್ಷದ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಿದ ನಂತರ ಮಾತನಾಡಿದ ಅವರು, ಕನ್ನಡಾಂಬೆಯ ಪುತ್ರರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವೇ ಕನ್ನಡ ಭಾಷೆ ಬೆಳೆಯಲು ಅಡ್ಡಿಯಾಗಿದ್ದೇವೆ. ಪ್ರತಿಯೊಂದು ಮಾತಿನಲ್ಲೂ ಇಂಗ್ಲೀಷ್ ಬೆರೆಸುತ್ತೇವೆ. ಹೀಗಾದಲ್ಲಿ ಕನ್ನಡ ಭಾಷೆ ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
 
ಕನ್ನಡ ವಿಚಾರದಲ್ಲಿ ಸಾಧನೆ ಮಾತಾಡಬೇಕು, ಮಾತಾಡೋದೆ ಸಾಧನೆಯಾಗಬಾರದು ಎಂದು ಸಚಿವ ಅನಂತ್ ಕುಮಾರ್ ಹೇಳಿದರು.
 
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗುತ್ತಿದೆ. ವಿವಾದಾತ್ಮಕವಾಗಿರುವ ಟಿಪ್ಪು ಜಯಂತಿ ಆಚರಣೆ ಬೇಡ ಎಂದು ರಾಜ್ಯದ ಜನತೆ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದರೂ ಸಿದ್ದರಾಮಯ್ಯ ಸರಕಾರ ಕ್ಯಾರೆ ಎನ್ನುತ್ತಿಲ್ಲ ಎಂದು ವಿಷಾದಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ