ಮುಸ್ಲಿಂಮರ ಮೇಲೆ ಯಾಕೆ ಕೋಪ, ಹಿಂದೂಗಳು ಏನು ಬಿಜೆಪಿಯವರ ಆಸ್ತಿಯಾ: ಪ್ರದೀಪ್ ಈಶ್ವರ್

Sampriya

ಶುಕ್ರವಾರ, 7 ಮಾರ್ಚ್ 2025 (16:29 IST)
Photo Courtesy X
ಬೆಂಗಳೂರು: ಮುಸ್ಲಿಂ ಬಾಂಧವರೆಂದರೆ ಬಿಜೆಪಿಯವರಿಗೆ ಯಾಕಿಷ್ಟು ಕೋಪ. ಹಿಂದೂ ಧರ್ಮ ಏನ್ ಇವರಪ್ಪನ ಮನೆ ಆಸ್ತಿನಾ ಎಂದು ವಿಪಕ್ಷ ನಾಯಕರಿಗೆ ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ನೀಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂದು ನಾಲ್ಕು ಲಕ್ಷ ಕೋಟಿ 9 ಸಾವಿರದ ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ.  ಇದೊಂದು ಅದ್ಭುತವಾದ ವಿಷನರಿ ಬಜೆಟ್. ನನ್ನ ಚಿಕ್ಕಾಬಳ್ಳಾಪುರ ಕ್ಷೇತ್ರಕ್ಕೆ ಇಂಟರ್‌ ನ್ಯಾಶನಲ್ ಪ್ಲವರ್ ಮಾರ್ಕೆಟ್‌ಗೆ ಸೇರಿದಂತೆ ಅನೇಕ ಕಾಮಗಾರಿಗೆ 140ಕೋಟಿ ಅನುದಾನ ನೀಡಿದ್ದಾರೆ. ವೈಯಕ್ತಿವಾಗಿ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಅಲ್ಪಸಂಖ್ಯಾತರ ಓಲೈಕೆಗಾಗಿ ಈ ಬಜೆಟ್ ಎಂಬ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು ಮುಸ್ಲಿಂ ಬಾಂಧವರೆಂದರೆ ಬಿಜೆಪಿಯವರಿಗೆ ಯಾಕಿಷ್ಟು ಕೋಪ. ಹಿಂದೂ ಧರ್ಮ ಏನ್ ಇವರಪ್ಪನ ಮನೆ ಆಸ್ತಿನಾ. ನಾನು ದೇವರನ್ನು ಪೂಜಿಸುತ್ತೇನೆ, ಶ್ರೀರಾಮ ಚಂದ್ರ ನನ್ನ ಆರಾಧ್ಯ ದೈವ. ಹಿಂದೂ ಧರ್ಮ ನನ್ನ ರಕ್ತದಲ್ಲಿದೆ, ಹಿಂದೂ ದೇವರನ್ನು ಭಕ್ತಿಯಿಂದ ಪೂಜಿಸುವ ನಾನು, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮವನ್ನು ಗೌರವಿಸುತ್ತೇನೆ.  ಇವರಲ್ಲ ಫೈಯರ್ ಬ್ರ್ಯಾಂಡ್ ಹಿಂದೂತ್ವವಾದಿಗಳು ಎನಿಸಿಕೊಳ್ಳಲು ಬೇರೆಯವರನ್ನು ಬೈದುಬಿಡಬೇಕಾ. ಇವರಲ್ಲಿ ಫೈಯರೂ ಇಲ್ಲ, ಬ್ರ್ಯಾಂಡ್ ಇಲ್ಲ, ಬರೀ ಡೋಂಕಿಗಳು ಎಂದು ಆಕ್ರೋಶ ಹೊರಹಾಕಿದರು.

ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಬಿಡುಗಡೆ ಮಾಡಿದ 5,300ಕೋಟಿ ಇನ್ನೂ ಬಿಡುಗಡೆಯಾಗಿಲ್ಲ. ಬಿಜೆಪಿಯವರಿಗೆ ಮಾನಮರ್ಯಾದೆ ಇದ್ದರೆ ಮೊದಲು ಕೇಂದ್ರ ಮೀಸಲಿಟ್ಟ ಅನುದಾನ ಬಿಡುಗಡೆ ಮಾಡಲಿ. ಅದರಿಂದ ನಾವು ಪ್ರಾಜೆಕ್ಟ್‌ ಅನ್ನು ಮುಂದುವರೆಸುತ್ತೇವೆ. ಕೇಂದ್ರ ಬಜೆಟ್‌ನ ಹಣವನ್ನು ರಿಲೀಸ್ ಮಾಡಕ್ಕೆ ಆಗದವರು ನಮ್ಮ ಮೇಲೆ  ಆರೋಪ ಮಾಡುತ್ತಾರೆ. ನಾವು ಅವರ ಮೇಲೆ ಆರೋಪ ಮಾಡುತ್ತೇವೆಂದು ಸುಖಾಸುಮ್ಮನೇ ಸಿದ್ದರಾಮಯ್ಯ ಅವರ 16ನೇ ಬಜೆಟ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ

ವಿರೋಧ ಪಕ್ಷದ ನಾಯಕರು ಬಜೆಟ್‌ ಆರಂಭವಾಗಿ ಅರ್ಧಗಂಟೆಯೊಳಗೆ ನಮ್ಮನ್ನು ಬೈಯಕ್ಕೆ ಶುರು ಮಾಡಿದ್ರು. ರಾಜ್ಯ ಸರ್ಕಾರವನ್ನು ಬೈಯುವ ಸಲುವಾಗಿ ಮೊದಲೇ ವಿರೋಧ ಪಕ್ಷದ ನಾಯಕರು ಸ್ಕ್ರಿಪ್ಟ್ ರೆಡಿ ಮಾಡಿ ತಂದಿದ್ರು ಎಂದು ಆಕ್ರೋಶ ಹೊರಹಾಕಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ