ಬೆಂಗಳೂರು: ಮೊದಲು ಸುಡುವುದಕ್ಕೆ ಜಾಗ ಕೊಡಿ, ಆಮೇಲೆ ಕಾಂಪೌಂಡ್ ಆದ್ರೂ ಕಟ್ಟಿ, ಕೋಟೆನಾದ್ರೂ ಕಟ್ಟಿ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ವಿರುದ್ದ ಎಂಎಲ್ಸಿ ಸಿಟಿ ರವಿ ಆಕ್ರೋಶ ಹೊರಹಾಕಿದರು.
ವಿಧಾನಸೌಧದಲ್ಲಿ ಬಜೆಟ್ ಬಗ್ಗೆ ಅಸಮಾಧಾನ ಹೊರಹಾಕಿದ ಅವರು, ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ, ಡಿಸಿಎಂ ಆಗಿ, ಮುಖ್ಯಮಂತ್ರಿಯಾಗಿ 16ನೇ ಬಜೆಟ್ ಮಂಡಿಸಿ ಖ್ಯಾತಿ ಪಡೆಯುವರೊಂದಿಗೆ ಅತೀ ಹೆಚ್ಚು ಸಾಲ ಮಾಡಿಯು ಕುಖ್ಯಾತಿಯನ್ನು ಪಡೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಬಜೆಟ್ ಗಾತ್ರ ಜಾಸ್ತಿ ಆಗುತ್ತಾ ಹೋಗಿದೆ. ಕಳೆದ ವರ್ಷದ ಬಜೆಟ್ನ್ನು ಅವಲೋಕಿಸಿದಾಗ 3 ಲಕ್ಷದ 22ಸಾವಿರ ಕೋಟಿ ರೂಪಾಯಿ ವಿವಿಧ ಯೋಜನೆಗೆಳಿಗೆ ಘೋಷಣೆ ಮಾಡಿದ್ದು. ಇದುವರೆಗೂ ಖರ್ಚು ಆಗಿದ್ದು ಬರೀ 1ಲಕ್ಷ 75ಸಾವಿರ ಕೋಟಿ ರೂಪಾಯಿ. ಇನ್ನೂ ಒಂದೂವರೆ ತಿಂಗಳ ಒಳಗೆ ಉಳಿದ ಹಣವನ್ನು ಖರ್ಚು ಮಾಡಲು ಸಾಧ್ಯವೇ. ಇದು ಅನುಷ್ಠಾನವಾಗುವ ಬಜೆಟ್ ಅಲ್ಲ, ಬರೀ ಘೋಷಣೆಯಾ ಬಜೆಟ್ ಎಂದು ವ್ಯಂಗ್ಯ ಮಾಡಿದರು.
ಈ ಬಜೆಟ್ನಲ್ಲೂ ಕೋಮುವಾದಿ ರೀತಿ ಮುಂದುವರೆದಿದೆ. ಸಿದ್ದರಾಮಯ್ಯ ಪ್ರಕಾರ ಜಾತ್ಯಾತೀತತೆ ಎಂದರೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ. ಎಷ್ಟೋ ಸಮುದಾಯಗಳಿಗೆ ಹೂಳಕ್ಕೆ ಸರಿಯಾದ ಸ್ಮಶಾನವೇ ಇಲ್ಲ, ಅವರಿಗೆ ಮೊದಲು ಹೂಳಕ್ಕೆ ಜಾಗ ಕೊಟ್ಟು ಆಮೇಲೆ ಕಾಂಪೌಂಡ್ ಆದ್ರೂ ಕಟ್ಟಿ, ಕೋಟೆನಾದ್ರೂ ಕಟ್ಟಿ ಎಂದು ಆಕ್ರೋಶ ಹೊರಹಾಕಿದರು.
ಅಲ್ಪಸಂಖ್ಯಾತರಿಗಾಗಿ ಸ್ಮಶಾನಕ್ಕೆ ಕಾಂಪೌಂಡ್ ಕಟ್ಟುವುದು ಇವರಿಗೆ ಆಧ್ಯತೆಯಾಗಿದೆ. ಎಷ್ಟೂ ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಅದು ಆದ್ಯತೆಯಾಗಬೇಕಿತ್ತು. ಮೊದಲು ಸುಡುವುದಕ್ಕೆ ಜಾಗ ಕೊಡಿ, ಆಮೇಲೆ ಏನ್ ಬೇಕಾದ್ರೂ ಕಟ್ಟಿ ಎಂದು ಕಿಡಿಕಾರಿದರು.