ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ರೂ ಸರ್ಕಾರ ಕೇರ್ ಮಾಡಲ್ಲ

Krishnaveni K

ಗುರುವಾರ, 19 ಸೆಪ್ಟಂಬರ್ 2024 (16:33 IST)
ಬೆಂಗಳೂರು: ರಾಜ್ಯ ಸರ್ಕಾರ ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳ ಮೇಲೆ ಸರಣಿ ಕೇಸ್ ದಾಖಲಿಸುತ್ತಿರುವುದರ ವಿರುದ್ಧ ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದ್ದಾರೆ.

ಬೆಳಗಾವಿಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ 3 ಜನ ಹಿಂದೂ ಯುವಕರಿಗೆ ಚಾಕುವಿನಿಂದ ಇರಿದಿದ್ದಾರೆ. ಕೋಲಾರದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಪ್ಯಾಲೆಸ್ಟೀನ್ ಧ್ವಜ ನೋಡುವಂತಾಗಿದೆ. ಕೋಲಾರದ ಮೆರವಣಿಗೆಯಲ್ಲಿ ಪ್ಯಾಲೆಸ್ಟೀನ್ ಧ್ವಜದ ಪ್ರದರ್ಶನ ಆಗಿದೆ. ನಿನ್ನೆ ಬೆಂಗಳೂರಿನ ನಂದಿನಿ ಲೇ ಔಟ್‍ನಲ್ಲಿ ರಾಷ್ಟ್ರಧ್ವಜ ವಿರೂಪಗೊಳಿಸಿ ರಾಷ್ಟ್ರಧ್ವಜದ ಅಶೋಕ ಚಕ್ರದ ಜಾಗದಲ್ಲಿ ಉರ್ದುವಿನಲ್ಲಿ ಬರೆದಿದ್ದಾರೆ. ಇಂಥ ಧ್ವಜವನ್ನು ಬೆಂಗಳೂರಿನಲ್ಲಿ ಏರಿಸುತ್ತಿದ್ದಾರೆ. ಇದು ಕರ್ನಾಟಕದ ರಾಜಧಾನಿಯ ಸ್ಥಿತಿ ಎಂದು ಕು. ಶೋಭಾ ಕರಂದ್ಲಾಜೆ ಅವರು ಕಳವಳ ವ್ಯಕ್ತಪಡಿಸಿದರು.

ಸಮಾಜಘಾತುಕರು, ದೇಶದ್ರೋಹಿಗಳು, ಅಪರಾಧಿಗಳಿಗೆ ಈ ಧೈರ್ಯ ಹೇಗೆ ಬಂದಿದೆ? ನೀವು ಮುಖ್ಯಮಂತ್ರಿ ಆದ ತಕ್ಷಣ ರಾಜ್ಯಸಭೆ ಚುನಾವಣೆ ನಡೆದಿತ್ತು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ವಿಧಾನಸೌಧದಲ್ಲಿ ಮೊದಲ ಬಾರಿಗೆ ನಾವು ಪಾಕಿಸ್ತಾನ್ ಜಿಂದಾಬಾದ್ ಕೇಳಿದೆವು ಎಂದು ಆತಂಕ ವ್ಯಕ್ತಪಡಿಸಿದರು. ಎಫ್‍ಎಸ್‍ಎಲ್ ವರದಿ ಬಂದ ಬಳಿಕ ಕೇಸು ಹಾಕುವುದಾಗಿ ಹೇಳಿ ದಿನ ತಳ್ಳಲಾಯಿತು ಎಂದು ಟೀಕಿಸಿದರು.

ಶಿವಮೊಗ್ಗದಲ್ಲಿ ಹಿಂದೂಗಳನ್ನು ಕಗ್ಗೊಲೆ ಮಾಡಿದ ಔರಂಗಬೇಬನ ರಕ್ತಸಿಕ್ತ ಖಡ್ಗ ಪ್ರದರ್ಶನ ಮಾಡುತ್ತಾರೆ. ಕೋಲಾರದಲ್ಲೂ ಇದರ ಪ್ರದರ್ಶನ ನಡೆಯುತ್ತದೆ. ಟಿಪ್ಪುವನ್ನು ವೈಭವೀಕರಿಸಲಾಗುತ್ತಿದೆ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹನುಮಾನ್ ಚಾಲೀಸ ಕೇಳುತ್ತಿದ್ದ ಹುಡುಗನ ಮೇಲೆ ಹಲ್ಲೆ ಮಾಡುತ್ತಾರೆ. ಕೇಳಲು ಹೋದ ನಮ್ಮ ಮೇಲೇ ಕೇಸು ಹಾಕಿದ್ದೀರಿ ಎಂದು ಆಕ್ಷೇಪಿಸಿದರು.

ಇವತ್ತು ಅಶೋಕ್ ಮತ್ತು ನಾವು ಮಾಡಿದ ತಪ್ಪೇನು?

ಇವತ್ತು ಅಶೋಕ್ ಮತ್ತು ನಾವು ಮಾಡಿದ ತಪ್ಪೇನು? ಯಾವ ಅಪರಾಧಕ್ಕಾಗಿ ನೀವು ಎಫ್‍ಐಆರ್ ಹಾಕಿದ್ದೀರಿ? ನಾವು ನಿಮ್ಮನ್ನು ಕೇಳಿದ್ದೇ ನಮ್ಮ ಅಪರಾಧ. ನಿಮ್ಮನ್ನು ಪ್ರಶ್ನಿಸಿದ್ದೇ ಅಪರಾಧ. ಇವತ್ತು ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದಕ್ಕಾಗಿ ಪ್ರಜಾತಂತ್ರವನ್ನು ಕಗ್ಗೊಲೆ ಮಾಡುವ ಕೆಲಸ ಮಾಡುತ್ತಿದ್ದೀರಿ. ಪ್ರಜಾತಂತ್ರದ ರಕ್ಷಕರು ನೀವು ಎಂದು ವ್ಯಂಗ್ಯವಾಡಿದರು.

ಮೊನ್ನೆ ಭಾನುವಾರ ರಾಜ್ಯಾದ್ಯಂತ ಸಂವಿಧಾನ ರಕ್ಷಣೆ ಮಾಡಬೇಕೆಂದು ಶಾಲೆ- ಕಾಲೇಜು ಮಕ್ಕಳ ಮಾನವ ಸರಪಳಿ ಮಾಡಿದ್ದೀರಿ? ಯಾವ ಪುರುಷಾರ್ಥಕ್ಕೆ? ಜನರು ಬರಲಿಲ್ಲ. ಮನೆಗೆ ಹೋಗಿದ್ದ ಮಕ್ಕಳನ್ನು ಕರೆದುಕೊಂಡು ಬಂದು ರಸ್ತೆ ತುಂಬ ಬಿಸಿಲಲ್ಲಿ ನಿಲ್ಲಿಸಿದ್ದೀರಿ. ಮಕ್ಕಳನ್ನು ಬಿಸಿಲಲ್ಲಿ ನಿಲ್ಲಿಸಿದ್ದಾರೆ ಎಂದು ನೂರಾರು ಫೋನ್ ಕರೆ ನಮಗೆ ಬಂದಿತ್ತು. ಯಾವ ಸಂವಿಧಾನದ ರಕ್ಷಣೆ ಮಾಡಲು ನೀವು ಹೊರಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ