ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಕೆಲವು ಕಡೆ ತುಂತುರು ಮಳೆ, ಇನ್ನು ಕೆಲವೆಡೆ ಮೋಡ ಕವಿದ ವಾತಾವರಣವಿತ್ತು. ಇಂದು ಮಳೆಯಿರುತ್ತಾ, ಬಿಸಿಲಿರುತ್ತಾ ಇಲ್ಲಿದೆ ಇಂದಿನ ಹವಾಮಾನ ವರದಿ.
ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ವಿಪರೀತ ಬಿಸಿಲು, ಉರಿ ಸೆಖೆಯ ನಡುವೆ ಕೆಲವು ಕಡೆ ತುಂತುರು ಮಳೆಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮಳೆ ಕಂಡುಬಂದಿತ್ತು.
ಆದರೆ ಇಂದು ಎಲ್ಲೂ ಮಳೆಯ ಸಾಧ್ಯತೆಯಿಲ್ಲ. ಬದಲಾಗಿ ಕೆಲವು ಕಡೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಬಹುದು. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಬಿಸಿಲು ತಕ್ಕಮಟ್ಟಿಗೆ ಕಡಿಮೆಯಾಗಲಿದೆ. ಆದರೆ ಮಳೆಯ ಸಾಧ್ಯತೆಯಿಲ್ಲ.
ಇಂದು ರಾಜ್ಯದ ಗರಿಷ್ಠ ತಾಪಮಾನದಲ್ಲಿ ನಿನ್ನೆಗೆ ಹೋಲಿಸಿದರೆ ಕೊಂಚ ಕಡಿಮೆಯಾಗಲಿದೆ. ನಿನ್ನೆ ಗರಿಷ್ಠ ತಾಪಮಾನ 30 ಡಿಗ್ರಿಯಷ್ಟಿತ್ತು. ಇಂದು ಗರಿಷ್ಠ ತಾಪಮಾನ 29 ಡಿಗ್ರಿಯಷ್ಟಿರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿಯಷ್ಟಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.