ಬೆಂಗಳೂರು: ಈ ವಾರ ಕೆಲವು ಕಡೆ ಮಳೆ, ಇನ್ನು ಕೆಲವು ಕಡೆ ವಿಪರೀತ ಬಿಸಿಲು ಕಂಡುಬಂದಿತ್ತು. ವಾರಂತ್ಯಕ್ಕೆ ರಾಜ್ಯದ ಹವಾಮಾನ ಹೇಗಿರಲಿದೆ ಇಲ್ಲಿದೆ ವಿವರ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲೂ ಕಂಡುಬಂದಿತ್ತು. ನೆರೆಯ ಕೇರಳದಲ್ಲಿ ನಿನ್ನೆಯವರೆಗೂ ಕೆಲವು ಕಡೆ ಮಳೆಯಾಗಿದ್ದು ಇದೆ. ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಜಿಲ್ಲೆಗಳಲ್ಲೂ ಈ ವಾರ ಅಲ್ಪ ಸ್ವಲ್ಪ ಮಳೆಯಾಗಿದೆ.
ಆದರೆ ವಾರಂತ್ಯಕ್ಕೆ ರಾಜ್ಯದಲ್ಲಿ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇಂದು ತುಂತುರು ಮಳೆ ಅಥವಾ ಮೋಡ ಕವಿದ ವಾತಾವರಣ ಕಂಡುಬಂದರೂ ಅಚ್ಚರಿಯಿಲ್ಲ. ಹಾಗಂತ ಶೆಖೆಯೇನೂ ಕಡಿಮೆಯಾಗಲ್ಲ.
ಕರಾವಳಿ ಜಿಲ್ಲೆಗಳಲ್ಲಂತೂ ಗರಿಷ್ಠ ತಾಪಮಾನ 33 ಡಿಗ್ರಿ ದಾಟಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಗರಿಷ್ಠ ತಾಪಮಾನ 32 ಡಿಗ್ರಿಯಷ್ಟಾಗಲಿದ್ದು, ಭಾಗಶಃ ಮೋಡಕವಿದ ವಾತಾವರಣವೂ ಕಂಡುಬಂದೀತು. ಇಂದು ಮತ್ತು ನಾಳೆ ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 32 ಡಿಗ್ರಿಯಷ್ಟು ಮತ್ತು ಕನಿಷ್ಠ ತಾಪಮಾನ ಸರಾಸರಿ 19 ಡಿಗ್ರಿಯಷ್ಟು ಕಂಡುಬರಲಿದೆ.