ಸಾರ್ವಜನಿಕ ವಲಯದ ಉದ್ದಿಮೆಗಳ ಉಳಿವಿಗೆ ಆರ್ಥಿಕ ಸಹಾಯ ಅವಶ್ಯಕ ಎಂದ ಖರ್ಗೆ

ಸೋಮವಾರ, 24 ಡಿಸೆಂಬರ್ 2018 (15:06 IST)
ದೇಶದ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಕೇಂದ್ರ ಸರ್ಕಾರವು ಆಯವ್ಯಯದಲ್ಲಿ ಅನುದಾನ ಮೀಸಲಿಡುವ ಮೂಲಕ ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಲಬುರಗಿಯ ಭಾರತ ಸಂಚಾರ ನಿಗಮದ ಕಚೇರಿಯಲ್ಲಿ ನಡೆದ ಟೆಲಿಕಾಂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ದೇಶದಲ್ಲಿ ವಿಶೇಷ ಸೇವೆಗಳ ಅವಶ್ಯಕತೆ ಇದ್ದಾಗ ಎಚ್.ಎಂ.ಟಿ., ಬಿ.ಎಸ್.ಎನ್.ಎಲ್., ಮೈಸೂರ ಸ್ಯಾಂಡಲ್ ಸೋಪ ಗಳಂಥಹ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ನಾಗರಿಕರ ಉಪಯೋಗಕ್ಕಾಗಿ ಪ್ರಾರಂಭಿಸಲಾಗಿದೆ. ಈ ಕ್ಷೇತ್ರಗಳು ಇಂದು ನಷ್ಟದಲ್ಲಿದ್ದು ಅವುಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ರಕ್ಷಿಸಬೇಕಾಗಿದೆ ಎಂದರು.

                ಕಡಿಮೆ ದರದಲ್ಲಿ ಗುಣಮಟ್ಟದ ಸೇವೆ ನೀಡುವವರಿಂದ ಸಾರ್ವಜನಿಕರು ಸೇವೆ  ಪಡೆಯುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ  ಖಾಸಗಿ ಟೆಲಿಕಾಂ ಕಂಪನಿಗಳು ಕಡಿಮೆ ದರದಲ್ಲಿ 4ಜಿ ಯಂಥಹ ಸೇವೆ ನೀಡುತ್ತಿದ್ದಾರೆ. ಬಿ.ಎಸ್.ಎನ್.ಎಲ್. ಸೇವೆಯು ದೇಶದ ಎಲ್ಲ ಭಾಗಗಳಲ್ಲಿ ಲಭ್ಯವಿದ್ದರು ಸಹ 4ಜಿ ಯಂಥಹ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ. ಸರ್ಕಾರವು ಬಿ.ಎಸ್.ಎನ್.ಎಲ್.ಗೆ 4ಜಿ ಸೇವೆ ಕಲ್ಪಿಸಿ ತಾಂತ್ರಿಕವಾಗಿ ಸಶಕ್ತಗೊಳಿಸಿ ಲಾಭದಾಯಕಗೊಳಿಸಬೇಕು. ಖಾಸಗಿ ಸಂಸ್ಥೆಗಳಿಗೆ ಸಹಾಯಮಾಡಲು ಹೋಗಿ ಸರ್ಕಾರಿ ಸಂಸ್ಥೆಗಳು ಮುಚ್ಚಬಾರದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ