ದೇಶದ ಪ್ರಗತಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಉತ್ತಮ ಬಜೆಟ್ನ್ನು ಮಂಡಿಸಿದ್ದು, ರಾಜ್ಯದ ಬಜೆಟ್ನಲ್ಲಿ ಕೊಡಗು ಜಿಲ್ಲೆಗೆ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಬೃಹತ್ ಗಾತ್ರದ ಬಜೆಟ್ ಮಂಡನೆ ಮಾಡಿದ್ದು, ರಾಜ್ಯ ಬಜೆಟ್ನಲ್ಲಿ ಕೊಡಗಿಗೆ ಪ್ಯಾಕೇಜ್ ದೊರೆಯುವ ನಿರೀಕ್ಷೆ ಇದೆ ಎಂದರು.
ಕ್ರೀಡಾ ವಿಶ್ವ ವಿದ್ಯಾನಿಲಯ, ಕೊಡವ ಅಭಿವೃದ್ಧಿ ನಿಗಮ, ಹೈಟೆಕ್ ಆಸ್ಪತ್ರೆ, ಹೊಸ ತಾಲೂಕಿಗೆ ಮಿನಿ ವಿಧಾನಸೌಧ, ರೈಲ್ವೇ ಸಂಪರ್ಕಕ್ಕೆ ಯೋಜನೆ ರೂಪಿಸಬೇಕು, ಕಾಫಿಗೆ 10 ಹೆಚ್.ಪಿ ಉಚಿತ ವಿದ್ಯುತ್ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.
ರೈಲ್ವೆ, ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕೆಲಸವಾಗುತ್ತಿದೆ. ಕೃಷಿ ಯಂತ್ರೋಪಕರಣಕ್ಕೆ ಸಬ್ಸಿಡಿ ನೀಡುವ ಯೋಜನೆ ರೂಪಿಸಲಾಗಿದೆ. ಶಿಕ್ಷಣ ಕ್ಷೇತ್ರ, ರಕ್ಷಣಾ ಕ್ಷೇತ್ರಕ್ಕೂ ಹೆಚ್ಚು ಉತ್ತೇಜನ ನೀಡಲಾಗಿದೆ. ಆತ್ಮನಿರ್ಭರ ಯೋಜನೆ ಸಹಕಾರಿಯಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಸೇರಿದಂತೆ ರಕ್ಷಣಾ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಆರೋಗ್ಯಕರವಾದ ಬಜೆಟ್ ಇದಾಗಿದೆ, ಮೋದಿ ಅವರು ವಾಜಪೇಯಿ ಅವರ ಕನಸನ್ನು ನನಸು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಇಷ್ಟು ವರ್ಷ ಬಯಸಿದ್ದು, ಈಗ ಸಾಕಾರಗೊಳ್ಳುತ್ತಿದೆ. ಒಂದೇ ಮಾತರಂ ಯೋಜನೆಯಲ್ಲಿ 400 ವೇಗದ ರೈಲು ಆರಂಭಿಸುವುದು ವಿಶೇಷವಾಗಿದೆ ಎಂದರು.