ರಾಯಬಾಗ: ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಮೇಖಳಿ ಗ್ರಾಮದ ರಾಮಮಂದಿರ ಮಠದ ಸ್ವಯಂ ಘೋಷಿತ ಲೋಕೇಶ್ವರ ಸ್ವಾಮಿಯನ್ನು ಮೂಡಲಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
17 ವರ್ಷದ ಅಪ್ರಾಪ್ತ ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮೇ 22ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಲೂಕಿನ ಗ್ರಾಮವೊಂದರ ಕುಟುಂಬಸ್ಥರು ಎರಡು ವರ್ಷಗಳಿಂದ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮ ಮಂದಿರ ಮಠಕ್ಕೆ ಆಗಾಗ ಹೋಗಿಬರುತ್ತಿರುವುದರಿಂದ ಲೋಕೇಶ್ವರ ಸ್ವಾಮಿ ಪರಿಚಯವಾಗಿತ್ತು.
ಮೇ 13ರಂದು ಬಾಲಕಿ ತನ್ನತಾಯಿಯ ಊರಿಗೆ ಹೋಗಿ ವಾಪಸ್ ಮನೆಗೆ ನಡೆದುಕೊಂಡು ಬರುತ್ತಿದ್ದರು. ಇದೇ ಮಾರ್ಗವಾಗಿ ಲೋಕೇಶ್ವರ ಸ್ವಾಮಿ ಕಾರಿನಲ್ಲಿ ಬರುತ್ತಿದ್ದಾಗ ಬಾಲಕಿಯನ್ನು ನೋಡಿ ಕಾರು ನಿಲ್ಲಿಸಿ ನಾನು ನಿಮ ಮನೆ ಕಡೆಗೆ ಹೋಗುತ್ತಿರುವುದಾಗಿ ಹೇಳಿ ಬಾಲಕಿಯನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ.
ನಂತರ ಬಾಗಲಕೋಟೆ ಮಾರ್ಗವಾಗಿ ಹೋಗುವ ದಾರಿಯ ಮಧ್ಯೆಕಾರು ನಿಲ್ಲಿಸಿ, ಮತ್ತೊಬ್ಬ ವ್ಯಕ್ತಿಯನ್ನು ಕರೆಸಿಕೊಂಡು ರಾಯಚೂರನ ಲಾಡ್ಜ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.
ಮೇ 16ರಂದು ಮುಂಜಾನೆ ಬಾಲಕಿ ಮನೆಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡಾಗ ಮಹಾಲಿಂಗಪೂರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಬಿಟ್ಟು ಈ ವಿಷಯ ಯಾರಿಗೂ ಹೇಳಬೇಡಾ ಎಂದು ಕೊಲೆ ಬೆದರಿಕೆ ಹಾಕಲಾಗಿದೆ.
ಬಾಲಕಿಯನ್ನು ಹುಡುಕಾಡಿದಾಗ ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದಾಳೆ. ಹೆದರಿದ ಬಾಲಕಿ ಮೇ 20ರಂದು ತನ್ನ ತಂದೆಯ ಮುಂದೆ ಲೋಕೇಶ್ವರ ಸ್ವಾಮಿ ಮಾಡಿರುವ ಕೃತ್ಯವನ್ನು ಹೇಳಿದ್ದಾರೆ.
ನಂತರ ಬಾಲಕಿಯ ತಂದೆ ಮೇ 21ರಂದು ಬಾಗಲಕೋಟೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.