ಸಂಯಮ ಕಳೆದುಕೊಂಡ ಸಚಿವ ಜಾರ್ಜ್...!

ಶುಕ್ರವಾರ, 21 ಅಕ್ಟೋಬರ್ 2016 (12:27 IST)

ಬೆಂಗಳೂರು: ಆರೋಪ ಹೊತ್ತು ಸಚಿವ ಸಂಪುಟದಿಂದ ಕೈಬಿಡಲ್ಪಟ್ಟಿದ್ದ ಕೆ.ಜೆ. ಜಾರ್ಜ್, ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದು ತಿಳಿದಿರುವ ವಿಷಯವೇ. ಆದರೆ ಅವರ ದುಡುಕು ಸ್ವಭಾವ, ಬೇಜವಬ್ದಾರಿ ಹೇಳಿಕೆ ಹಾಗೂ ವರ್ತನೆ ಮಾಧ್ಯಮ ಪ್ರತಿನಿಧಿಗಳ ಮುಂದೇ ಎದುರಾಗಿದ್ದು ವಿಪರ್ಯಾಸ. ಮಾಧ್ಯಮ ಪ್ರತಿನಿಧಿಗಳು ಜಾರ್ಜ್ ಅವರಿಗೆ ಕೇಳಿದ ಪ್ರಶ್ನೆಯೊಂದಕ್ಕೆ ಸಂಯಮ ಕಳೆದುಕೊಂಡು ಬೇಜವಾಬ್ದಾರಿಯಿಂದ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 

ಕೆಪಿಸಿಸಿ ಕಚೇರಿಯಲ್ಲಿ ಸಾರ್ವಜನಿಕರಿಂದ ಮನವಿ ಪತ್ರಗಳನ್ನು ಸ್ವೀಕರಿಸಿದ ನಂತರ, ಬಸವೇಶ್ವರ ವೃತ್ತದಿಂದ ಹೆಬ್ಬಾಳದ ಎಸ್ಟೀಮ್ ಮಾಲ್ವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು  ಗರಂ ಆದರು. ಉಕ್ಕಿನ ಸೇತುವೆಗೆ 400 ಕೋಟಿ ರು. ವೆಚ್ಚ ಹೆಚ್ಚಿಸಿರುವ ಬಗ್ಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುತ್ತೇವೊ, ಬಿಡುತ್ತೇವೊ ಅದರ ಉಸಾಬರಿ ನಿಮಗೇಕೆ? ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಏಕೆ ಮಾಡುತ್ತೀರಿ? ಅಗತ್ಯ ಬಿದ್ದರೆ ಅನುಮೋದನೆ ಪಡೆಯುತ್ತೇವೆ ಎಂದು ತಾವು ಸಚಿವ ಎನ್ನುವ ಸ್ಥಾನವನ್ನು ಮರೆತು ಪ್ರತಿಕ್ರಿಯಿಸಿದರು.

 

ಮಾಧ್ಯಮ ಸಣ್ಣ ವಿಷಯವನ್ನು ಸಹ ವೈಭವೀಕರಿಸಿ ಜನರ ಮುಂದಿಡುವುದು ಸರಿಯಲ್ಲ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಕಾಯ್ದೆ(ಕೆಟಿಟಿಪಿ) ಪ್ರಕಾರ ಯೋಜನಾ ವೆಚ್ಚದಲ್ಲಿ ಶೇ. 30ರಷ್ಟು ಹೆಚ್ಚಳ ಮಾಡಲು ಅವಕಾಶವಿದೆ. ಯೋಜನೆಗೆ ಅಗತ್ಯವಿರುವಷ್ಟು ಹಣ ಒದಗಿಸಲು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ನಾನು ಸಿದ್ಧನಿದ್ದೇನೆ. ಅದಕ್ಕೆ ಹೇಗೆ ಅನುಮೋದನೆ ಪಡೆಯಬೇಕೆನ್ನುವು ನನಗೆ ಚೆನ್ನಾಗಿ ಗೊತ್ತು. ಯೋಜನಾ ವೆಚ್ಚದಲ್ಲಿ ಹೆಚ್ಚಳವಾಗಿರುವ ಕುರಿತು ನಿಮಗ್ಯಾಕೆ ಅಷ್ಟೊಂದು ಆಸಕ್ತಿ ಎಂದು ಅರ್ಥವಿಲ್ಲದ ಪ್ರಶ್ನೆಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ಕೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ