ಬೆಂಗಳೂರು: ಗೃಹಲಕ್ಷ್ಮಿ ಹಣವನ್ನು ತಿಂಗಳು-ತಿಂಗಳು ಹಾಕ್ತೀವಿ ಎಂದಿಲ್ಲ ಎಂದ ಡಿಸಿಎಂ ಡಿಕೆ ಶಿವಕುಮಾರ್ ಗೆ ಈಗ ನೆಟ್ಟಿಗರು ತಪರಾಕಿ ನೀಡಿದ್ದಾರೆ. ಹಾಗಿದ್ದರೆ ಪ್ರತೀ ತಿಂಗಳು ಎಂದರೆ ಏನು ಅರ್ಥ ಎಂದು ಕೇಳಿದ್ದಾರೆ.
ನಿನ್ನೆ ಸಾಧನಾ ಸಮಾವೇಶದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಡಿಸಿಎಂ ಡಿಕೆ ಶಿವಕುಮಾರ್, ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ ಎಂಬ ಪತ್ರಿಕರ್ತರ ಪ್ರಶ್ನೆಗೆ ಉತ್ತರಿಸುವಾಗ, ತಿಂಗಳು ತಿಂಗಳು ಹಾಕ್ತೀವಿ ಎಂದು ನಾವು ಹೇಳಿಲ್ಲ. ಗುತ್ತಿಗೆದಾರರಿಗೂ ಕೆಲಸವಾದ ತಕ್ಷಣ ಹಣ ಬರುತ್ತಾ ಎಂದೆಲ್ಲಾ ನೆಪ ಹೇಳಿದ್ದರು.
ಅವರ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಹಾಗಿದ್ದರೆ ಗೃಹಲಕ್ಷ್ಮಿ ಜಾಹೀರಾತಿನಲ್ಲಿ ಪ್ರತೀ ತಿಂಗಳು ಎಂದು ಹಾಕುವ ಉದ್ದೇಶವೇನು? ಹಾಗಂದರೆ ಅರ್ಥವೇನು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಕೇವಲ ಅಧಿಕಾರಕ್ಕೆ ಬರಲು ಮಾತ್ರ ಗ್ಯಾರಂಟಿ ಯೋಜನೆ ಎನ್ನುವುದು ಈಗ ಸ್ಪಷ್ಟವಾಗಿದೆ ಎಂದಿದ್ದಾರೆ. ಗ್ಯಾರಂಟಿ ಯೋಜನೆಗೆ ಹಣವಿಲ್ಲ ಎಂದು ಒಪ್ಪಿಕೊಳ್ಳಿ, ಅದನ್ನು ಬಿಟ್ಟು ಮತದಾರರನ್ನು ಈ ರೀತಿ ಮೂರ್ಖರನ್ನಾಗಿಸಬೇಡಿ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.