ಬೆಂಗಳೂರು: ಗೃಹಲಕ್ಷ್ಮಿ ಹಣ ಮೂರು ತಿಂಗಳಿನಿಂದ ಜಮೆ ಆಗಿಲ್ಲ. ಯಾವಾಗ ಜಮೆ ಆಗುತ್ತದೆ ಎಂದು ಇಂದು ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ಏನು ಹೇಳಿದರು ಗೊತ್ತಾ?
ಕಳೆದ ಮೂರು ತಿಂಗಳಿನಿಂದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಹಣ ಕ್ರೆಡಿಟ್ ಆಗಿಲ್ಲ. ಫಲಾನುಭವಿಗಳು ಈಗಾಗಲೇ ತಮ್ಮ ಬ್ಯಾಂಕ್ ಖಾತೆಗಳನ್ನು ಚೆಕ್ ಮಾಡಿ ಸೋತಿದ್ದಾರೆ.
ಯೋಜನೆಯ ಪ್ರಕಾರ ಸರ್ಕಾರ ಪ್ರತೀ ತಿಂಗಳೂ ಮಹಿಳೆಯರ ಖಾತೆಗೆ 2,000 ರೂ. ಹಣ ಜಮೆ ಮಾಡಬೇಕಿತ್ತು. ಆದರೆ ಮೂರು ತಿಂಗಳಿನಿಂದ ಹಣ ಬಂದಿಲ್ಲ. ಈ ಬಗ್ಗೆ ಮಹಿಳೆಯರು ಈಗಾಗಲೇ ಸರ್ಕಾರವನ್ನು ಪ್ರಶ್ನೆ ಮಾಡಿದ್ದು, ಹೀಗೆ ಮಾಡಿದ್ರೆ ಮುಂದಿನ ಬಾರಿ ವೋಟ್ ಹಾಕಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಇಂದು ಮಾಧ್ಯಮಗಳು ಗೃಹಲಕ್ಷ್ಮಿ ಹಣ ಯಾವಾಗ ಹಾಕ್ತೀರಿ ಎಂದು ಪ್ರಶ್ನೆ ಮಾಡಿದಾಗ ಸಿಎಂ ಹೇಳಿದ್ದೇ ಬೇರೆ. ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ಕೊರತೆಯಿಲ್ಲ. ಕಳೆದ ಬಜೆಟ್ ನಲ್ಲೂ ಗ್ಯಾರಂಟಿಗಾಗಿ 52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಈ ವರ್ಷ 50 ಸಾವಿರದ 18 ಕೋಟಿ ರೂ. ಮೀಸಲಿಡಲಾಗಿದೆ. ಹೀಗಾಗಿ ಹಣಕಾಸಿನ ಕೊರತೆಯಿಲ್ಲ ಎಂದರು. ಗೃಹಲಕ್ಷ್ಮಿ ಹಣ ಯಾವಾಗ ಹಾಕ್ತೀರಿ ಎಂಬುದಕ್ಕೆ ಉತ್ತರ ಕೊಡದೇ ತೆರಳಿದರು.