ಕ್ರೂರ ವಿಧಿಯಾಟಕ್ಕೆ ನವಜಾತ ಶಿಶು ಬಲಿ

ಶನಿವಾರ, 5 ಆಗಸ್ಟ್ 2023 (18:20 IST)
ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟಿದ್ದರು. ಇದರ ಜೊತೆಗೆ ಅನೇಕ ಜನ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಕಲುಷಿತ ನೀರನ್ನು ಸೇವಿಸಿದ ಪರಿಣಾಮ ಕಣ್ಣು ಬಿಡುವ ಮುನ್ನವೇ ನವಜಾತ ಶಿಶುವೊಂದು ಭ್ರೂಣಾವಸ್ಥೆಯಲ್ಲೇ ಮೃತಪಟ್ಟಿದೆ. ಕವಾಡಿಗರಹಟ್ಟಿ ನಿವಾಸಿ ಉಷಾ ಹಾಗೂ ಯುವರಾಜ್ ದಂಪತಿಯ ಮಗು ಜನಿಸುವ ಮುನ್ನವೇ ನಿಧನವಾಗಿದೆ. ಜುಲೈ 31ರಂದು ಕಲುಷಿತ ನೀರು ಸೇವಿಸಿದ ಪರಿಣಾಮ ಉಷಾ ತೀವ್ರ ವಾಂತಿ, ಭೇದಿಯಿಂದ ಬಳಲಿದ್ದರು. ಈ ಸಂಬಂಧ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. 8 ತಿಂಗಳ ಗರ್ಭಿಣಿ ಉಷಾರನ್ನು ಆಲ್ಟ್ರಾ ಸೌಂಡ್ ಸ್ಕ್ಯಾನಿಂಗ್​ಗೆ ಒಳಪಡಿಸಿದಾಗ ಗರ್ಭದೊಳಗಿನ ಶಿಶುವಿನ ಹೃದಯ ಬಡಿತ ನಿಂತಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಸಿಜೇರಿಯನ್​ ಮಾಡಿ ಮಗುವನ್ನು ಹೊರತೆಗೆದಿದ್ದಾರೆ. ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ