ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥ ಕಾರ್ಯಕ್ರಮ

ಭಾನುವಾರ, 30 ಏಪ್ರಿಲ್ 2023 (16:00 IST)
ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಸಂಬಂಧ ಮತದಾರರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಗರದಾದ್ಯಂತ ಹಮ್ಮಿಕೊಂಡಿರುವ ನಮ್ಮ ನಡೆ ಮತಗಟ್ಟೆಯ ಕಡೆ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಮುಖ್ಯ ಚುನಾವಣಾಧಿಕಾರಿಯಾದ  ಮನೋಜ್ ಕುಮಾರ್ ಮೀನಾ ಹಾಗೂ ಜಿಲ್ಲಾ ಚುನಾವಣಾಧಿಕಾರಿ  ಮತ್ತು ಬಿಬಿಎಂಪಿಯ ಮುಖ್ಯ ಆಯುಕ್ತರಾದ  ತುಷಾರ್ ಗಿರಿ ನಾಥ್ ರವರು ಜಕ್ಕೂರು ಬಡಾವಣೆಯ ನ್ಯೂ ಕೃಷ್ಣ ಸಾಗರ ಫುಡ್ ಕೋರ್ಟ್ ವೃತ್ತದಲ್ಲಿ ಚಾಲನೆ ನೀಡಿದರು.
 
ಜಕ್ಕೂರು ಬಡಾವಣೆಯ ನ್ಯೂ ಕೃಷ್ಣ ಸಾಗರ ಫುಡ್ ಕೋರ್ಟ್ ನಿಂದ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶ್ರೀ ರಾಮ ವಿದ್ಯಾಲಯ, ಜಕ್ಕೂರು ವೃತ್ತದ ಮೂಲಕ ಸಾಗಿ ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯವರೆಗು ಸಾಗಿ ಮತಗಟ್ಟೆಯ ಆವರಣದಲ್ಲಿ ಪ್ರಜಾಪ್ರಭುತ್ವದ ಹಬ್ಬ - ಮೇ 10 ಮತದಾನ ಎಂಬ ದ್ಯೇಯ ಒಳಗೊಂಡಿರುವ ಬಾವುಟವನ್ನು ದ್ವಜಾರೋಹಣ ಮಾಡಲಾಯಿತು.
 
ಪಾಲಿಕೆಯ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗ, ನಾಗರಿಕರು, ಸೈಕಲ್, ದ್ವಿಚಕ್ರ, ಆಟೋ ಟಿಪ್ಪರ್, ಕಾಲ್ನಡಿಗೆ ಮೂಲಕ ನಡೆದ ಜಾಥ ಕಾರ್ಯಕ್ರಮದಲ್ಲಿ ಎಲ್.ಇ.ಡಿ ಪರೆದೆಯುಳ್ಳ ವಾಹನದಲ್ಲಿ  ಚುನಾವಣಾ ಗೀತೆಯನ್ನು ಬಳಸಿಕೊಂಡು, ರಸ್ತೆಯುದ್ದಕ್ಕೂ ಬಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ, ಘೋಷಣೆಗಳನ್ನು ಕೂಗುತ್ತಾ ಮತದಾರರಲ್ಲಿ ಮೇ. 10 ರಂದು ತಪ್ಪದೆ ಮತದಾನ ಮಾಡಲು ಮನವರಿಕೆ ಮಾಡಲಾಯಿತು.
 
ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ 7 ಮತಗಟ್ಟೆಗಳು ಬರಲಿದ್ದು, ಕನಿಷ್ಟ ಸೌಲಭ್ಯಗಳಿರುವುದನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಪರಿಶೀಲಿಸಿ, ಮತದಾನದ ದಿನ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ನಗರದಾದ್ಯಂತ ವಾರ್ಡ್ ವಾರು ಅಪರ ಜಿಲ್ಲಾ ಚುನಾವಣಾಧಿಕಾರಿ, ಚು‌ನಾವಣಾಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಜಾಥ ನಡೆಸಿ, ಸ್ಥಳೀಯ ಮತಗಟ್ಟೆ ವ್ಯಾಪ್ತಿಯ ಮತದಾರರೊಂದಿಗೆ ಮತದಾನ ಮಾಡುವ ಮತಗಟ್ಟೆಗೆ ಭೇಟಿ ನೀಡಿ ಮತದಾರರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಲಾಯಿತು‌.
 
ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಶ್ರೀ ಸಂಗಪ್ಪ, ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಉಪ ಆಯುಕ್ತರಾದ ಮಮತಾ, ಚುನಾವಣಾ ರಾಯಭಾರಿಯಾದ ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ