ರಾಜಕೀಯ ತಾಳ್ಮೆಯಿರಬೇಕು: ಭಿನ್ನಮತೀಯರಿಗೆ ಡಿ.ಕೆ.ಶಿವಕುಮಾರ್ ಸಲಹೆ

ಶುಕ್ರವಾರ, 24 ಜೂನ್ 2016 (16:45 IST)
ಸಂಪುಟ ಪುನಾರಚನೆಯಿಂದ ಭುಗಿಲೆದ್ದಿರುವ ಭಿನ್ನಮತ ಶೀಘ್ರದಲ್ಲಿಯೇ ಶಮನವಾಗಲಿದೆ. ರಾಜಕೀಯದಲ್ಲಿ ತಾಳ್ಮೆಯಿರಬೇಕು ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಭಿನ್ನಮತೀಯ ಶಾಸಕರಿಗೆ ಸಲಹೆ ನೀಡಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಿರಿಯ ನಾಯಕರು ಭಿನ್ನಮತ ಶಮನಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
 
ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೆಲವು ಬಾರಿ ಪ್ರಮುಖ ನಾಯಕರಿಗೆ ಸಚಿವ ಸ್ಥಾನ ಕೈ ತಪ್ಪಿಹೋಗುವುದು ಸಹಜ. ಹಿಂದೆ ನನಗೂ ಕೂಡಾ ಸಚಿವ ಸ್ಥಾನವನ್ನು ನೀಡಿರಲಿಲ್ಲ. ಆದರೆ, ನಾನು ಯಾವತ್ತೂ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಮಾತನಾಡಲಿಲ್ಲ. ತಾಳ್ಮೆ ಕಾದುಕೊಂಡೆ. ಮತ್ತೆ ಸಚಿವ ಸ್ಥಾನ ತಾನಾಗಿ ಅರಸಿ ಬಂತು ಎಂದು ಹೇಳಿದ್ದಾರೆ. 
 
ಆದಾಗ್ಯೂ ಪ್ರತಿಯೊಂದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದೇನೆ. ಯಾವತ್ತು ಸಚಿವ ಸ್ಥಾನ ಹೋಗಿದ್ದರ ಬಗ್ಗೆ ವಿಷಾದ ವ್ಯಕ್ತಪಡಿಸಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಕೆಲವು ಶಾಸಕರಿಗೆ ಸಂಪುಟದಲ್ಲಿ ಸ್ಥಾನ ದೊರೆಯದಿದ್ದಕ್ಕೆ ನಿರಾಶೆಯಾಗಿದೆ ಅವರೊಂದಿಗೆ ಮಾತುಕತೆ ನಡೆಸಿ ಚರ್ಚಿಸಲಾಗುವುದು ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ