ಹೊಸಕೆರೆಹಳ್ಳಿ ಕೆರೆಯಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ಪ್ಲಾನ್

ಶನಿವಾರ, 25 ಮಾರ್ಚ್ 2023 (14:38 IST)
ಸಿಲಿಕಾನ್ ಸಿಟಿಯ ಕೆರೆಗಳನ್ನ ರಕ್ಷಿಸಬೇಕಿದ್ದ ಬಿಬಿಎಂಪಿ, ಇದೀಗ ತಾನೇ ಕೆರೆಗಳ ಒತ್ತುವರಿ ಮಾಡೋಕೆ ಮುಂದಾಯ್ತಾ ಅನ್ನೋ ಅನುಮಾನ ಮೂಡ್ತಿದೆ. ಜನಸಾಮಾನ್ಯರ ವಿರೋಧದ ನಡುವೆಯೂ ರಸ್ತೆ ಮಾಡಲು ಮುಂದಾಗಿದ್ದ ಪಾಲಿಕೆ, ಇದೀಗ ಜನಾಕ್ರೋಶಕ್ಕೆ ಮಣಿದು ಎಚ್ಚೆತ್ತುಕೊಂಡಿದೆ. ಒಂದೆಡೆ ವಿಶಾಲವಾದ ಮೈದಾನದಂತಿರೋ ಬೃಹತ್ ಜಾಗ, ಮತ್ತೊಂದೆಡೆ ಅದೇ ಜಾಗದಲ್ಲಿ ಸ್ಕೇಲ್ನಿಂದ ಗೆರ ಎಳೆದಂತೆ ಮಧ್ಯಭಾಗದಲ್ಲಿ ನಡೆಯುತ್ತಿರೋ ರಸ್ತೆ ಕಾಮಗಾರಿ. ಈ ದೃಶ್ಯವನ್ನ ನೋಡಿ ಇದ್ಯಾವುದೋ ಹೈವೇ ಮಾಡೋಕೆ ಪ್ಲಾನ್ ಮಾಡಿರೋ ಸ್ಥಳ ಅಂತಾ ಯಾಮಾರಬೇಡಿ. ರಾಜ್ಯ ರಾಜಧಾನಿಯ ಕೆರೆಗಳ ರಕ್ಷಣೆ ಮಾಡಬೇಕಿದ್ದ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯತನದ ಪರಮಾವಧಿಯೇ ಈ ಕಾಮಗಾರಿ ಅಂತಾ ಸ್ಥಳೀಯರು ಆರೋಪಿಸಿಸದ್ದಾರೆ.

ಜಾಗ ಇರೋದು ಬೆಂಗಳೂರಿನಿಂದ ಕನಕಪುರದ ಕಡೆ ಸಾಗೋ ನಡುವೆ ಸಿಗೋ ಹೊಸಕೆರೆಹಳ್ಳಿಯಲ್ಲಿ. ಮುಖ್ಯವಾದ ವಿಷಯ ಅಂದ್ರೆ ಇದು ರಸ್ತೆ ಮಾಡೋಕೆ ಗುರುತು ಮಾಡಿರೋ ಜಾಗ ಅಲ್ಲಾ. ಬದಲಿಗೆ ಹೊಸಕೆರೆಹಳ್ಳಿಯ ಕೆರೆಯ ಮಧ್ಯೆಯೇ ಪಾಲಿಕೆ ಅಧಿಕಾರಿಗಳು ನಿಯಮಗಳನ್ನ ಗಾಳಿಗೆ ತೂರಿ ನಿರ್ಮಿಸುತ್ತಿರೋ ರಸ್ತೆ ಇದು. ಇದೀಗ ಪಾಲಿಕೆಯ ಈ ನಡೆ ಅಲ್ಲಿನ ಸ್ಥಳೀಯರನ್ನ ಕೆರಳುವಂತೆ ಮಾಡಿದೆ. ಇತ್ತ ಸುಮಾರು 47 ಎಕರೆ ವಿಸ್ತೀರ್ಣ ಇರೋ ಈ ಕೆರೆ ಬರೋಬ್ಬರಿ 500 ವರ್ಷಗಳ ಇತಿಹಾಸ ಹೊಂದಿದೆ. ಆದ್ರೆ ಪಾಲಿಕೆ ಅಧಿಕಾರಿಗಳು ಖಾಸಗಿಯವರ ಅನುಕೂಲಕ್ಕೆ ರಸ್ತೆ ಮಾಡ್ತಿರೋದಾಗಿ ಸ್ಥಳೀಯರು ಆರೋಪ ಮಾಡ್ತಿದ್ದಾರೆ. ಇನ್ನು ಕಾಮಗಾರಿಯ ಬಗ್ಗೆ ಲೇಕ್ ಇಂಜಿನಿಯರ್ ಕೇಳಿದ್ರೆ, ನಮಗೆ ಕಾಮಗಾರಿ ನಡೆತ್ತಿರೋದೆ ಗೊತ್ತಿಲ್ಲ ಅಂತಿರೋದು ಪಾಲಿಕೆ ಅನುಮತಿ ಇಲ್ಲದೇ ಕೆಲಸ ನಡೀತಾ ಅನ್ನೋ ಗುಮಾನಿ ಮೂಡಿಸಿದೆ.

ಸದ್ಯ ಈ ಕಾಮಗಾರಿ ವಿರುದ್ಧ ಸ್ಥಳೀಯರು ತೀವ್ರ ಹೊರಹಾಕಿದ್ದು, ಕೋರ್ಟ್ ಮೆಟ್ಟಿಲೇರೋಕು ಸಿದ್ಧತೆ ನಡೆಸಿದ್ರು. ಸ್ಥಳೀಯರ ತೀವ್ರ ವಿರೋಧ ಬಂದ ಬಳಿಕ ಗುತ್ತಿಗೆದಾರನಿಗೆ  ಕರೆ ಮಾಡಿರೋ ಲೇಕ್ ಇಂಜಿನಿಯರ್ ಕೆಲಸ ಸ್ಥಗಿತಕ್ಕೆ ಸೂಚಿಸಿದ್ದಾರೆ. ಸದ್ಯ ತಾತ್ಕಾಲಿಕವಾಗಿ ಕಾಮಗಾರಿಗೇನೋ ಬ್ರೇಕ್ ಬಿದ್ದಿದೆ, ಆದ್ರೆ ಸಾರ್ವಜನಿಕ ಆಸ್ತಿಗಳನ್ನ ಕಾಪಾಡಬೇಕಿದ್ದವರೇ ಈ ರೀತಿ ಕೆಲಸಕ್ಕೆ ಸಾಥ್ ನೀಡಿದ್ದು ಎಷ್ಟು ಸರಿ ಅಂತಾ ಜನರು ಪ್ರಶ್ನಿಸುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ