ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷರಾಗಿ ಪ್ರೋ.ರಾಜೀವ್ ಗೌಡ ನೇಮಕ

ಮಂಗಳವಾರ, 15 ಆಗಸ್ಟ್ 2023 (19:50 IST)
ಬೆಂಗಳೂರು : ಪ್ರೋ.ಎಂ.ವಿ ರಾಜೀವ್ ಗೌಡ ಅವರನ್ನು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.

ಈ ಹಿಂದೆ ರಾಜ್ಯ ಯೋಜನಾ ಮಂಡಳಿ ಎಂಬ ಹೆಸರಿನಲ್ಲಿ ಅಸ್ತಿತ್ವದಲ್ಲಿದ್ದ ಸಂಸ್ಥೆಗೆ ಈಗ ರಾಜ್ಯ ಪರಿವರ್ತನಾ ಸಂಸ್ಥೆ ಎಂದು ಮರು ನಾಮಕರಣ ಮಾಡಲಾಗಿದೆ. ಇದು ಕರ್ನಾಟಕದ ಪಾಲಿಗೆ ನೀತಿ ಆಯೋಗದ ಹೊಣೆಗಾರಿಕೆಗೆ ಸಮಾನವಾಗಿದೆ. ರಾಜೀವ್ ಗೌಡ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಈ ಜವಬ್ದಾರಿ ವಹಿಸಲಾಗಿದೆ.

ಪ್ರೋ.ರಾಜೀವ್ ಗೌಡ ಅವರು 2014- 20ರ ವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ಅಲ್ಲದೇ ಎಐಸಿಸಿಯ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದರು. 2019ರ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಸಮಿತಿಯ ಸಂಚಾಲಕರಾಗಿಯೂ ಆಗಿದ್ದರು. ಜೊತೆಗೆ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

ಅವರು ಬೆಂಗಳೂರಿನ ಐಐಎಂನಲ್ಲಿ ಅರ್ಥಶಾಸ್ತ್ರ ಹಾಗೂ ಸಮಾಜ ವಿಜ್ಞಾನದ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಆರ್ಬಿಐನ ಕೇಂದ್ರ ಮಂಡಳಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಸರ್ಕಾರಕ್ಕೆ ಶಿಫಾರಸು ಮಾಡುವುದು, ನೂತನ ಪರಿಹಾರ ಮಾರ್ಗಗಳನ್ನು ಸರ್ಕಾರಕ್ಕೆ ಸೂಚಿಸುವುದು ಎಸ್ಐಟಿಕೆಯ ಕಾರ್ಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ