ಬೆಂಗಳೂರು: ಶಾಸಕರು ವಿದೇಶ ಪ್ರವಾಸ ಹೋಗಿದ್ದು, ಯಾಕೆ ಹೋಗಿದ್ದಾರೋ ನನಗೆ ಗೊತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದು ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯಲ್ಲಿರುವಾಗಲೇ ಬಹುತೇಕ ಸಿದ್ದರಾಮಯ್ಯ ಆಪ್ತ ಬಣದ ಶಾಸಕರು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸ ತೆರಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಗೆ ಪ್ರಶ್ನೆ ಮಾಡಲಾಗಿದೆ.
ಇದಕ್ಕೆ ಉತ್ತರಿಸಿದ್ದ ಅವರು ಶಾಸಕರು ಯಾಕೆ ಹೋಗಿದ್ದಾರೆ, ಅವರಾಗಿಯೇ ಹೋಗಿದ್ದಾರೋ, ಯಾರಾದರೂ ಕಳಿಸಿದ್ದಾರೋ ನನಗೆ ಗೊತ್ತಿಲ್ಲ. ಯಾರಾದರೂ ಸ್ಪಾನ್ಸರ್ ಮಾಡಿ ಕಳುಹಿಸಿರಬಹುದು. ಪಕ್ಷದ ಅಧ್ಯಕ್ಷನಾಗಿ ಅದರ ಬಗ್ಗೆ ನನಗೆ ಅದರ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ.
ಇದಕ್ಕೆ ಟಾಂಗ್ ಕೊಟ್ಟಿರುವ ಆರ್ ಅಶೋಕ್, ಮುಖ್ಯಮಂತ್ರಿಗಳಿಗೆ, ಕೆಪಿಸಿಸಿ ಅಧ್ಯಕ್ಷರಿಗೆ ಶಾಸಕರ ಮೇಲೆ ಹಿಡಿತವಿಲ್ಲ. ಸಚಿವರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಒಟ್ಟಿನಲ್ಲಿ ಈ ನಾಲಾಯಕ್ ಸರ್ಕಾರ ತೊಲಗುವವರೆಗೆ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ ಎಂದಿದ್ದಾರೆ.