ದೇಶದ ಮೇಲೆ ಹಿಂದೂಗಳಷ್ಟೇ ಮುಸ್ಲಿಮರಿಗೂ ಹಕ್ಕಿದೆ ಎಂದ ಸಂತೋಷ್ ಲಾಡ್: ಕಿಚಾಯಿಸಿದ ಆರ್ ಅಶೋಕ್

Krishnaveni K

ಗುರುವಾರ, 11 ಸೆಪ್ಟಂಬರ್ 2025 (13:54 IST)
ಬೆಂಗಳೂರು: ದೇಶದ ಮೇಲೆ ಹಿಂದೂಗಳಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಮುಸ್ಲಿಮರಿಗೂ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ನೀಡಿದ್ದ ಹೇಳಿಕೆಯನ್ನು ವಿಪಕ್ಷ ನಾಯಕ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯಿಸುವಾಗ ಸಂತೋಷ್ ಲಾಡ್, ಮುಸ್ಲಿಮರೂ ಸಮಾನ ಹಕ್ಕುದಾರರು ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ. ಪಾಪ ಹೀಗೆಲ್ಲಾ ಹೇಳಿ ನಿಮ್ಮ ಸಚಿವ ಸ್ಥಾನ ಕಳೆದುಕೊಳ್ಳಬೇಡಿ ಎಂದಿದ್ದಾರೆ.

‘ಪಾಪ ನಿಮಗೆ ನಿಮ್ಮ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಸಂಪೂರ್ಣವಾಗಿ ಅರಿವಿದ್ದಂತಿಲ್ಲ. "ಭಾರತದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸ್ಲಿಮರು ಹೊಂದಿರಬೇಕು": ಎಂದು ಸ್ವತಃ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಹೇಳಿದ್ದರು.

ಹೀಗೆಲ್ಲ ನಿಮ್ಮ ಪಕ್ಷದ ಸಿದ್ಧಾಂತದ ವಿರುದ್ಧ ಮಾತನಾಡಿದರೆ ರಾಹುಲ್ ಗಾಂಧಿ ಅವರಿಗೆ ಕೋಪ ಬಂದು ಸಿಎಂ ಸಿದ್ದರಾಮಯ್ಯನವರಿಗೆ ಫೋನು ಮಾಡಿ ಮಾಜಿ ಸಚಿವ ಕೆಎನ್ ರಾಜಣ್ಣ ಅವರನ್ನು ಮುಲಾಜಿಲ್ಲದೆ ಸಂಪುಟದಿಂದ ವಜಾ ಮಾಡಿದಂತೆ ತಮ್ಮನ್ನೂ ಸಂಪುಟದಿಂದ ವಜಾ ಮಾಡಿಬಿಟ್ಟಾರು, ಹುಷಾರ್!

ಕಾಂಗ್ರೆಸ್ ಪಕ್ಷ ಅಂದರೆ ಆಧುನಿಕ ಮುಸ್ಲಿಂ ಲೀಗ್. ಅದನ್ನು ಮೊದಲು ಅರ್ಥ ಮಾಡಿಕೊಳ್ಳಿ. ತಮ್ಮ ಕುರ್ಚಿ ಉಳಿಸಿಕೊಳ್ಳಿ’ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ