ರಾಯಣ್ಣ, ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗಾಗಿ ಹೊಡೆದಾಟ

ಶನಿವಾರ, 17 ಅಕ್ಟೋಬರ್ 2020 (16:55 IST)
ಎರಡು ಸಮುದಾಯಗಳ ನಡುವೆ ಮೂರ್ತಿ ಪ್ರತಿಷ್ಠಾಪನೆ ವಿಷಯ ತಾರಕಕ್ಕೇರಿದ ಪರಿಣಾಮ ಗಲಾಟೆ ನಡೆದಿದೆ. ಘಟನೆಯಲ್ಲಿ ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಾಗೂ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಯ ಪ್ರತಿಷ್ಠೆಗಾಗಿ ಎರಡು ಸಮುದಾಯದವರ ನಡುವೆ ಗಲಾಟೆ ನಡೆದಿದೆ.

ಗದಗ ತಾಲೂಕಿನ ಬಳಗಾನೂರ ಗ್ರಾಮದಲ್ಲಿಈ ಘಟನೆ ನಡೆದಿದ್ದು, ಬಳಗಾನೂರ ಗ್ರಾಮದ ಬಸ್ ನಿಲ್ದಾಣದ ಬಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದು ಹಾಲುಮತ ಕುರುಬ ಸಮಾಜದವರು ಮುಂದಾಗಿದ್ದರು. ಅದೇ ಜಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ‌ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಪಂಚಮಸಾಲಿ ಸಮುದಾಯವರ ನಡುವೆ ಜಿದ್ದಾಜಿದ್ದಿ ನಡೆದಿದೆ. 

ಈ ಹಿಂದೆ ಹಾಕಿದ್ದ ರಾಣಿ ಚೆನ್ನಮ್ಮ ನಾಮಫಲಕವನ್ನು ತೆರವುಗೊಳಿಸಲಾಗಿತ್ತು. ಈಗ ರಾತ್ರೋರಾತ್ರಿ ನಿರ್ಮಾಣವಾಗಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ತೆರವುಗೊಳಿಸಿದ್ದಾರೆ. ಇದರಿಂದ ರಾಯಣ್ಣ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.

ಈ ವೇಳೆ ಗುಂಪು ಚದುರಿಸಲು ಪೊಲೀಸರಿಂದ ಲಘುಲಾಠಿ ಚಾರ್ಜ್ ನಡೆದಿದೆ. ಕೆಲವು ಕಿಡಿಗೇಡಿಗಳು ಗದಗ ಎಸಿ ರಾಯಪ್ಪ ಹುಣಸಗಿ ಹಾಗೂ ಡಿವೈಎಸ್ ಪಿ ಪ್ರಹ್ಲಾದ್ ಅವರ ಎರಡು ವಾಹನಗಳ ಮೇಲೆ ಕಲ್ಲು ಎಸೆದು ಧ್ವಂಸಗೊಳಿಸಿದ್ದಾರೆ. ಕೆಲವರನ್ನು ಬಂಧನ ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ