ರೈತರು ಅಡವಿಟ್ಟಿದ್ದ ಚಿನ್ನಾಭರಣ ಫೈನಾನ್ಸ್‌ ಗೆ ಮಾರಾಟ; ಬ್ಯಾಂಕ್‌ ಮ್ಯಾನೇಜರ್‌ ಬಂಧನ

ಸೋಮವಾರ, 28 ಮಾರ್ಚ್ 2022 (18:57 IST)
ಸಹಕಾರ ಬ್ಯಾಂಕ್ ವೊಂದರಲ್ಲಿ ರೈತರು ಅಡವಿಟ್ಟಿದ್ದ ಚಿನ್ನವನ್ನು ಬ್ಯಾಂಕ್ ನ ವ್ಯವಸ್ಥಾಪಕ ಖಾಸಗಿ ಫೈನಾನ್ಸ್ ಕಂಪನಿಗೆ ಮಾರಾಟ ಮಾಡಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳವಾಡಿಯ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಬ್ಯಾಂಕ್ ನಲ್ಲಿ ರೈತರು ಅಡವಿಟ್ಟಿದ್ದ ಸುಮಾರು 8 ಕೆಜಿಯ ಚಿನ್ನಾಭರಣವನ್ನು ಬ್ಯಾಂಕ್ ನ ವ್ಯವಸ್ಥಾಪಕ ಗೋವಿಂದಪ್ಪ ಎನ್ನುವವರು ಫೈನಾನ್ಸ್‌ ಗೆ ಮಾರಾಟ ಮಾಡಿದ್ದಾರೆ.
ರೈತರು ತಾನು ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಳ್ಳಲು ಬಂದಾಗ ಅವರಿಗೆ ಒಡವೆ ನೀಡದೆ ಮ್ಯಾನೇಜರ್‌ ಸತಾಯಿಸುತ್ತಿದ್ದ. ಈ ಬಗ್ಗೆ ಮೇಲಧಿಕಾರಿಗಳಿಗೆ ರೈತ ದೂರು ಸಲ್ಲಿಸಿದ್ದರು.
ರೈತನ ದೂರಿನ ಆಧಾರದ ಮೇಲೆ ಗೋವಿಂದಪ್ಪನನ್ನು ವಿಚಾರಿಸಿದಾಗ ಬಸ್ ನಲ್ಲಿ ಹೋಗುವಾಗ ಚಿನ್ನಾಭರಣ ಕಳತನವಾಯಿತು ಎಂದು ಸುಳ್ಳು ಹೇಳಿದ.‌ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ.
ಪ್ರಕರಣ ಸಂಬಂಧ ಗೋವಿಂದಪ್ಪನನ್ನು ಬಂಧಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಎಷ್ಟು ಮೊತ್ತದ ಚಿನ್ನಾಭರಣ ಮಾರಾಟ ಮಾಡಿದ್ದಾನೆ ಎಂಬುದು ಆಡಿಟ್ ನಂತರವೇ ಹೊರಬೀಳಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ