ಕೋಲಾರದಲ್ಲಿಂದು ಮಾಧ್ಯಮಗಳ ಜತೆ ಮಾತುನಾಡುತ್ತಾ ಪ್ರತಿಪಕ್ಷ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು; “ಧಾರ್ಮಿಕ ಸ್ಥಳಗಳಲ್ಲಿ, ಜಾತ್ರೆಗಳಲ್ಲಿ ಒಂದು ಧರ್ಮದ ಜನರಿಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ, ಹಿಜಾಬ್ ಕೇಸರಿ ಶಾಲು ಅಂತ ಹೇಳಿ ಶಾಲೆ ಕಾಲೇಜುಗಳಲ್ಲಿ ಸಂಘರ್ಷ ಉಂಟು ಮಾಡಲಾಯಿತು. ಇದೆಲ್ಲಕ್ಕೂ ಕಾರಣ ಆ ಮಹಾನುಭಾವವರೇ (ಸಿದ್ದರಾಮಯ್ಯ) ಕಾರಣ ಎಂದು ದೂರಿದರು.
ರಾಜ್ಯದ ಹಿತದೃಷ್ಟಿಯಿಂದ ನಮಗೆ ಇಷ್ಟವಿಲ್ಲದಿದ್ದರೂ ಕಾಂಗ್ರೆಸ್ ಜತೆ ಸರಕಾರ ಮಾಡಲು ಒಪ್ಪಿಕೊಂಡೆವು. ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ನಾವು ಅವರ ಜತೆ ಕೈಜೋಡಿಸಿದೆವು. 2004ರಲ್ಲೂ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೆವು. ಆಗ ನಮ್ಮನ್ನು ಅಪಮಾನಿಸಿ ಚಿತ್ರಹಿಂಸೆ ನೀಡಿದರು. ಆಗ ಅನಿವಾರ್ಯವಾಗಿ ನಾವು ಬೇರೆ ತೀರ್ಮಾನಗಳನ್ನು ಮಾಡಬೇಕಾಯಿತು. ಅದಕ್ಕೂ ಸಿದ್ದರಾಮಯ್ಯನವರೇ ಮೂಲ ಕಾರಣ ಎಂದು ಅವರು ಹೇಳಿದರು.
2018ರ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪಕ್ಷವೂ ಬಿಜೆಪಿಯ ಬೀ ಟೀಂ ಎಂದು ದುಪ್ಷ್ರಚಾರ ಮಾಡಿದರು. ಹೀಗಾಗಿ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆದ್ದಿತು. ಇಲ್ಲವಾಗಿದ್ದಿದ್ದರೆ ಅವರು 75 ಸ್ಥಾನಗಳ ಒಳಗೇ ಇರುತ್ತಿದ್ದರು. ಈಗ ಅವರು ಇದೇ ಮಹಾನುಭಾವರ ಸಹಕಾರದಿಂದ ಅಧಿಕಾರಕ್ಕೆ ಬಂದು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಅದಕ್ಕೆ ಮೂಲ ಕಾರಣ ಇವರೇ ಅಲ್ಲವೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.ಈಗ ಜೆಡಿಎಸ್, ಬಿಜೆಪಿಯೊಂದಿಗೆ ಅಡ್ಜಸ್ಟಮೆಂಟ್ ಮಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಇದೊಂದೇ ಈಗ ಬಾಕಿ ಉಳಿದಿರೋದು. ಅವರು ಬಿಜೆಪಿ ಜತೆ ಏನೆಲ್ಲ ಒಳ ಸಂಬಂಧ ಹೊಂದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. 2018ರಲ್ಲಿ ನಡೆದ ಇವರ ಆಟ ಇನ್ನು ಮುಂದೆ ನಡೆಯಲ್ಲ. ಅವರ ತಲೆಯಲ್ಲಿ ಸರಕಿಲ್ಲ, ಅದಕ್ಕೆ ಜೆಡಿಎಸ್ ಜಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಛೇಡಿಸಿದರು.
ರಾಜ್ಯದಲ್ಲಿ ಜನರು ಶಾಂತಿಯುತವಾಗಿ ಬಾಳ್ವೆ ಮಾಡುವ, ನೆಮ್ಮದಿಯ ಜೀವನ ನಡೆಸುವುದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಬೇಕಿಲ್ಲ. ಅವರಿಗೆ ಬೇಕಿರುವುದು ಕೇವಲ ಅಧಿಕಾರ ಮಾತ್ರ. ಅಧಿಕಾರಕ್ಕಾಗಿ ಅವರು ಏನನ್ನು ಮಾಡಲಿಕ್ಕೂ ಹೇಸುವುದಿಲ್ಲ. ರಾಜ್ಯದ ಭಾವೈಕ್ಯತೆಯನ್ನು ಎರಡೂ ಪಕ್ಷಗಳು ಹಾಳು ಮಾಡುತ್ತಿವೆ. ಧರ್ಮದ ಧರ್ಮದ ನಡುವೆ ಸಂಘರ್ಷ ಉಂಟು ಮಾಡಿ ಶಾಂತಿ ಹಾಳು ಮಾಡುವುದೇ ಇವರ ಉದ್ದೇಶ. ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಆರೋಪಿಸಿದರು.