ದರ್ಶನ್‌ಗೆ ಬಿರಿಯಾನಿ ನೀಡುತ್ತಿರುವ ಬಗ್ಗೆ ಗೃಹ ಸಚಿವರು ಏನಂದ್ರೂ ನೋಡಿ

Sampriya

ಮಂಗಳವಾರ, 9 ಜುಲೈ 2024 (19:24 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ರಾಜಾತಿಥ್ಯ ಸಿಗುತ್ತಿರುವ ಆರೋಪದ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದಾರೆ.

ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ರಾಷ್ಟ್ರಪತಿಗಳ  ಸುಧರಣಾ ಸೇವೆ ಪದಕ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರಧಾನ ಮತ್ತು ಸನ್ನಡತೆಯ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜೈಲಿನೊಳಗೆ ಯಾರಿಗೂ ನೇರವಾಗಿ ಬರಲು ಅವಕಾಶವಿಲ್ಲ. ಇನ್ನೂ ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಆಹಾರವನ್ನೇ ನಟ ದರ್ಶನ್ ಅವರಿಗೆ ನೀಡಲಾಗುತ್ತಿದೆ. ಕೆಲವರು ದರ್ಶನ್‌ಗೆ ಬಿರಿಯಾನಿ ನೀಡುತ್ತಿದ್ದಾರೆಂಬ ಆರೋಪ ಮಾಡುತ್ತಿದ್ದಾರೆ. ಆದರೆ ಆ ರೀತಿಯ ವ್ಯವಸ್ಥೆಯನ್ನು ನಾವು ಮಾಡಿಲ್ಲ. ಅವೆಲ್ಲ ಸುಳ್ಳು ಎಂದು ಹೇಳಿದರು.

ಈ ಹಿಂದೆ ಜೈಲಿನ ಒಳಗೆ ಫೋನ್ ತಂದುಕೊಡುತ್ತಾರೆ. ಕೈದಿಗಳು ಹೊರಗಿನವರ ಜೊತೆ ಸಂಪರ್ಕ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಜೈಲಿನಲ್ಲಿ ಬೇರೆ ರಾಜ್ಯದ ಕೈದಿಗಳು ಇದ್ದಾರೆ. ಇಂತಹ ಸಂದರ್ಭದಲ್ಲಿ ಜಾಮರ್ ಅಳವಡಿಸುವುದರಿಂದ ಅಕ್ರಮಗಳನ್ನು ತಡೆಗಟ್ಟಬಹುದು ಎಂದರು.

ಇಲಾಖೆಯಲ್ಲಿ ಬದಲಾವಣೆಯನ್ನು ತರಲಾಗುವುದು. ಇಂದು ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾದ ಸತೀಶ್ ಎಂಬ ವ್ಯಕ್ತಿ ಡಿಪ್ಲೋಮಾ ಮುಗಿಸಿದ್ದಾನೆ. ಈ ವಿದ್ಯೆಯಿಂದ ಅವರು ಹೊರಗಡೆ ಹೋದಾಗ ಅವನ ಜೀವನಕ್ಕೆ ದಾರಿಯಾಗಲಿದೆ. ಹೀಗೇ ಕೈದಿಯಾಗಿ ಬಂದಿರುವವರಿಗೆ ಕಾರ್ಪೆಂಟರ್, ಎಲೆಕ್ಟ್ರಿಕ್ ಕೆಲಸ, ಕಂಪ್ಯೂಟರ್ ತರಬೇತಿ ಕಲಿಸಿಕೊಡುತ್ತೇವೆ. ಇದರಿಂದ ಕೈದಿಗಳಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ