ಗೌರಿ ಹಬ್ಬದಂದೇ ಕರ್ನಾಟಕದಲ್ಲಿ ಸರಣಿ ಅಪಘಾತ: 8 ಯುವಕರು ಸೇರಿ 12 ಮಂದಿ ಸಾವು

Sampriya

ಶುಕ್ರವಾರ, 6 ಸೆಪ್ಟಂಬರ್ 2024 (14:45 IST)
Photo Courtesy X
ಬೆಂಗಳೂರು: ಗೌರಿ ಹಬ್ಬವಾದ ಶುಕ್ರವಾರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಎಂಟು ಮಂದಿ ಯುವಕರು. ವಿಜಯಪುರ, ಬಾಗಲಕೋಟೆ, ರಾಮನಗರಮತ್ತು ಮಂಗಳೂರಿನಲ್ಲಿ ಅಪಘಾತಗಳು ಸಂಭವಿಸಿವೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಳಿ ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ನಾಲ್ವರು ಮೃತಪಟ್ಟಿದ್ದಾರೆ.  ನಿಂಗರಾಜ ಚೌಧರಿ (22), ಅನೀಲ ಖೈನೂರ (23), ಉದಯಕುಮಾರ ಪ್ಯಾಟಿ (19), ರಾಯಪ್ಪ ಬಾಗೇವಾಡಿ (24) ಮೃತ ದುರ್ದೈವಿಗಳು. ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಮತ್ತು ರಸ್ತೆ ಬದಿ ನಿಂತಿದ್ದ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.

ರಾಮನಗರ ಜಿಲ್ಲೆಯ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುಮೂರ್ತಿ (39), ಶೇಖ್ ಆಸೀಫ್ (45), ವೆಂಕಟೇಶ್ (50)‌ ಮೃತ ದುರ್ದೈವಿಗಳು. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮತ್ತೋರ್ವ ಸಾವೀಗಿಡಾಗಿದ್ದಾನೆ.

ಬಾಗಲಕೋಟೆ ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಬಾಗಲಕೋಟೆ ಬಿವಿವಿಯ ಶ್ರುತಿ ಒಂದಕುದರಿ (32), ಡೆಂಟಲ್ ಕಾಲೇಜ್ ಉಪನ್ಯಾಸಕಿ, ರಜನಿ ಒಂದಕುದರಿ (34), ಸಾಫ್ಟ್‌ವೇರ್ ಎಂಜಿನಿಯರ್ ಅಭಿಷೇಕ್ ದೋತ್ರಿ (20) ಮೃತರು. ಸ್ಕೂಟಿಯಲ್ಲಿದ್ದ ಮಹಿಳೆಯರು ಡಿವೈಡರ್ ಕ್ರಾಸ್​ ಮಾಡಿ ಅಡ್ಡ ಬಂದು ವೇಗವಾಗಿ ಹೊರಟಿದ್ದ ಯಮಹಾ ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ. ಒರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಯೆಯ್ಯಾಡಿ ಎಂಬಲ್ಲಿ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಉಪ್ಪಿನಂಗಡಿಯ ಚೇತನ್ (24), ಕೋಡಿಕಲ್​​ನ ಕಾಶಿನಾಥ್ (17) ಮೃತರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ