ತನ್ನ ವಿರುದ್ಧ ಮಸಲತ್ತು ಮಾಡಿದ್ದ ಸಿಟಿ ರವಿಗೆ ಟಿಕೆಟ್ ಕೊಡದಿದ್ದಕ್ಕೆ ಶೋಭಾ ಕರಂದ್ಲಾಜೆ ಫುಲ್ ಖುಷಿ

Sampriya

ಗುರುವಾರ, 14 ಮಾರ್ಚ್ 2024 (12:25 IST)
Photo Courtesy: Twitter
ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರದಿಂದ ಟಿಕೆಟ್ ಸಿಕ್ಕ ಬೆನ್ನಲ್ಲೇ ಉಡುಪಿ- ಚಿಕ್ಕಮಗಳೂರು ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಇಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. 
 
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ಬಗ್ಗೆ ವಿಶ್ವಾಸವಿತ್ತು. ದೆಹಲಿ ನಾಯಕರು ಯಾವ ಜವಾಬ್ದಾರಿ ನನಗೆ ನೀಡಿದರು ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಯಾವುದೇ ರಾಜ್ಯದ ಚುನಾವಣೆ ಆಗಲಿ, ಯಾವುದೇ ಇಲಾಖೆ ಆಗಲಿ ಅಲ್ಲೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಈ ಕಾರಣಕ್ಕೆ ನನಗೆ ಮತ್ತೇ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ ಎಂದರು. 
 
ಸಿ.ಟಿ.ರವಿ   ವಿರುದ್ಧ ಪರೋಕ್ಷ ಟಾಂಗ್ ನೀಡಿ ಮಾತನಾಡಿದ ಶೋಭಾ, ನನ್ನ ಕಾಲಾವಧಿಯಲ್ಲಿ ಉಡುಪಿ-ಚಿಕ್ಕಮಗಳೂರಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೇ. ಆದರೆ ಅದನ್ನು ಪರಿಗಣಿಸದೇ ನನಗೆ ಕೆಲವರು ವಿರೋಧ ಮಾಡಿದ್ದರು.  ಟಿಕೆಟ್‌ಗಾಗಿ ಏನೇನೂ ಕಸರತ್ತನ್ನು ಮಾಡಿದರು ಅವರು ಯಶಸ್ವಿಯಾಗಿಲ್ಲ. ಇದೀಗ ಅವರಿಂದಲೂ ಟಿಕೆಟ್ ತಗೊಂಡು ಬರೋಕೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು. 
 
ಬಿಜೆಪಿಯಲ್ಲಿ ಪಕ್ಷ ವಿರೋಧಿ, ಗಲಭೆ, ಅವಮಾನ ಮಾಡಿದವರಿಗೆ ಟಿಕೆಟ್ ಸಿಗಲ್ಲ. ಇನ್ನೂ ಮುಂದೆಯಾದ್ರು ಅವರು ಪಾಠ ಕಲಿಯಲಿ. ಬಿಜೆಪಿ ಒಂದು ಶಿಸ್ತಿನ ಪಕ್ಷ.  ಪಕ್ಷಕ್ಕೆ ಅವಮಾನ ಮಾಡಿದರೆ ಮಣೆ ಹಾಕಲ್ಲ ಎಂಬುದು ಸಾಬೀತಾಗಿದೆ. ಈ ಬೆಳವಣಿಗೆಯಿಂದ ನನಗೆ ತುಂಬಾ ಸಂತೋಷವಾಗಿದೆ. ಬೆಂಗಳೂರಲ್ಲಿ ಶಾಸಕರಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದು, ಇದೀಗ ನನಗೆ ಎಲ್ಲರ ಆಶೀರ್ವಾದ ಬೇಕಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ