ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು

ಗುರುವಾರ, 11 ಮೇ 2017 (18:18 IST)
ಬಿಸಲಿನ ಬೇಗೆಯಿಂದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿದೆ ಎಂದು ಮಠದ ಮೂಲಗಳು ತಿಳಿಸಿವೆ.
 
ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆರೋಗ್ಯದಲ್ಲಿ ಏರು ಪೇರು ಕಂಡ ಹಿನ್ನೆಲೆಯಲ್ಲಿ ವೈದ್ಯರಿಗೆ ಮಾಹಿತಿ ನೀಡಿದಾಗ, ವೈದ್ಯರು ಶ್ರೀಗಳ ಆರೋಗ್ಯ ಪರೀಕ್ಷಿಸಿ ಚಿಕಿತ್ಸೆ ನೀಡಿದ್ದಾರೆ ಅಗತ್ಯವಾದಲ್ಲಿ ಬೇರೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
 
10 ಜನ ವೈದ್ಯರ ತಂಡ ಶ್ರೀಗಳ ಆರೋಗ್ಯ ತಪಾಸಣೆಯಲ್ಲಿ ತೊಡಗಿದ್ದು, ಐವರು ವೈದ್ಯರ ತಂಡ ಮಠದಲ್ಲಿಯೇ ಉಳಿದು ಶ್ರೀಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಶ್ರೀಗಳಿಗೆ ಚಿಕಿತ್ಸೆ ನೀಡಿದ ಬಳಿಕೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ವೈದ್ಯರು, ಸ್ವಾಮಿಜಿಗಳ ಶ್ವಾಸಕೋಶ, ಮೂತ್ರ ಮತ್ತು ಜಠರದಲ್ಲಿ ಸೋಂಕಿರುವುದು ಕಂಡು ಬಂದಿದೆ. ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಆಸ್ಪತ್ರೆ ಸೇರಲು ಶ್ರೀಗಳು ನಿರಾಕರಿಸಿದ್ದಾರೆ ಎಂದು ವೈದ್ಯ ಡಾ.ವೆಂಕಟರಮಣ ತಿಳಿಸಿದ್ದಾರೆ.
ಶ್ರೀಗಳು ಅಸ್ವಸ್ಥರಾಗಿದ್ದರಿಂದ ಭಕ್ತರಿಗೆ ಮಠದೊಳಗೆ ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ. ಭಕ್ತರು ಮಠಕ್ಕೆ ಆಗಮಿಸಿ ಶ್ರೀಗಳಿಗೆ ತೊಂದರೆ ನೀಡಬಾರದು ಎಂದು ಮಠಾಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.  

ವೆಬ್ದುನಿಯಾವನ್ನು ಓದಿ