ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕರೆದು ಮಾತನಾಡುವೆ; ನಾನು ಭೇಟಿ ಮಾಡಿ ಮಾತನಾಡುವೆ. ಈ ರೀತಿಯ ಹಾರಿಕೆಯ ಉತ್ತರವನ್ನು ಮಾನ್ಯ ಮುಖ್ಯಮಂತ್ರಿಯವರು ಕೊಡಲು ಆರಂಭಿಸಿದ್ದಾರೆ ಎಂದು ಆಕ್ಷೇಪಿಸಿದರು.
ಈಗ ಹಾರಿಕೆ ಉತ್ತರ ಕೊಟ್ಟರೆ ಸಾಧ್ಯವಿಲ್ಲ. ಮಿತಿ ಮೀರಿದ ಭ್ರಷ್ಟಾಚಾರವನ್ನು ಸಹಿಸಲಾಗದ ಕಾಂಗ್ರೆಸ್ಸಿಗರೂ ಇದ್ದಾರೆ. ಶಾಸಕ ಬಿ.ಆರ್.ಪಾಟೀಲ್ ಅವರ ಹೇಳಿಕೆ ಇರಬಹುದು; ಗೋಪಾಲಕೃಷ್ಣ ಅವರೂ ಒಂದೇ ಒಂದು ಚರಂಡಿ, ರಸ್ತೆ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾಗಿ ಗಮನ ಸೆಳೆದರು.
ಅಸಮರ್ಥರಿದ್ದೀರಿ ನೀವು; ಕೇವಲ ಅಧಿಕಾರಕ್ಕೆ ಅಂಟಿ ಕುಳಿತಿದ್ದೀರಿ ಅಷ್ಟೇ; ಈ ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸಲು ನಿಮ್ಮಿಂದ ಸಾಧ್ಯವಿಲ್ಲ; ರಾಜೀನಾಮೆ ಕೊಡಿ ಎಂದು ಇಷ್ಟು ಜನರು ಹೇಳಿದರೂ ಇವರು ರಾಜೀನಾಮೆ ಕೊಡುತ್ತಿಲ್ಲ. ದೇವರಾಜ ಅರಸು ಅವರು ಏಳೂವರೆ ವರ್ಷ ಮುಖ್ಯಮಂತ್ರಿ ಆಗಿದ್ದರು. ಅದನ್ನು ಮೀರಿ ಒಂದು ದಿನವಾದರೂ ಇರಬೇಕೆಂಬ ಹಠದಲ್ಲಿ ನೀವು ಕುಳಿತಿದ್ದೀರಿ. ನೀವು ದೇವರಾಜ ಅರಸು ಅವರ ಕಾಲ ದೂಳಿಗೂ ಸಮ ಅಲ್ಲ ಎಂದು ಟೀಕಿಸಿದರು.
ದೇವರಾಜ ಅರಸು ಅವರು ನಿರಂತರವಾಗಿ ಏಳೂವರೆ ವರ್ಷ ಮುಖ್ಯಮಂತ್ರಿ ಆಗಿದ್ದರು. ನೀವು ಅವಕಾಶ ಸಿಕ್ಕಿದಾಗ ಸರಿಯಾಗಿ ಕೆಲಸ ಮಾಡದೆ ಜನರಿಂದ ತಿರಸ್ಕಾರಗೊಂಡು ನಿಮ್ಮದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತವರ ನೀವು ಎಂದು ವ್ಯಂಗ್ಯವಾಡಿದರು. ಅರಸು ಅವರು ನಿರಂತರ ಸಿಎಂ ಆಗಿದ್ದವರು. ನೀವು ಇದೀಗ ನಿರಂತರತೆ ಇಲ್ಲದೇ ಮತ್ತೆ ಮುಖ್ಯಮಂತ್ರಿ ಆಗಿದ್ದೀರಿ. ಅವರ ದಾಖಲೆ ಮುರಿಯಲಸಾಧ್ಯ ಎಂದು ನುಡಿದರು.