ತಪ್ಪು ಮಾಡಿಲ್ಲಾಂದ್ರೆ ಸೈಟು ಕೊಟ್ಟಿದ್ಯಾಕೆ ಎಂದು ಪ್ರಶ್ನೆ ಮಾಡಿದ್ದ ಸಿದ್ದರಾಮಯ್ಯ ಈಗ ಮಾಡಿದ್ದೂ ಅದೇ (Video)

Krishnaveni K

ಮಂಗಳವಾರ, 1 ಅಕ್ಟೋಬರ್ 2024 (11:54 IST)
ಬೆಂಗಳೂರು: ತಪ್ಪು ಮಾಡಿಲ್ಲ ಅಂದರೆ ಸೈಟು ಕೊಟ್ಟಿದ್ಯಾಕೆ? ತಪ್ಪು ಮಾಡಿದ್ದಕ್ಕೇ ಅಲ್ವಾ ಕೊಟ್ಟಿದ್ದು.. ಎಂದು ಸಿದ್ದರಾಮಯ್ಯ ತಮ್ಮ ಎಂದಿನ ಶೈಲಿಯಲ್ಲೇ ಅಂದು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ್ದರು. ಇಂದು ಸಿದ್ದರಾಮಯ್ಯ ಕೂಡಾ ಅದನ್ನೇ ಮಾಡಿದ್ದಾರೆ.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಅಕ್ರಮವಾಗಿ 14 ಸೈಟುಗಳನ್ನು ನೀಡಲಾಗಿದೆ ಎಂದು ಆರೋಪ ಬಂದಿದೆ. ಈ ಸಂಬಂಧ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ. ಎಫ್ ಐಆರ್ ಕೂಡಾ ದಾಖಲಾಗಿದೆ. ಇದರ ಬೆನ್ನಲ್ಲೇ ಪಾರ್ವತಿ ಸಿದ್ದರಾಮಯ್ಯ ಮುಡಾಗೆ ಪತ್ರ ಬರೆದು ತಮಗೆ ನೀಡಿದ್ದ 14 ಸೈಟು ಹಿಂಪಡೆದುಕೊಳ್ಳಲು ಮನವಿ ಮಾಡಿದ್ದರು.

ಇದರ ಬೆನ್ನಲ್ಲೇ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈ ಹಿಂದೆ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಿದ್ದರಾಮಯ್ಯ, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ತಪ್ಪು ಮಾಡಿದ್ದಕ್ಕೇ ಅಲ್ವಾ ಸೈಟು ಮರಳಿಸಿದ್ದು. ತಪ್ಪು ಮಾಡಿಲ್ಲ ಅಂದಾದರೆ ಸೈಟು ಕೊಟ್ಟಿದ್ಯಾಕೆ ಎಂದು ಮಾಧ್ಯಮಗಳ ಮುಂದೆ ಪ್ರಶ್ನೆ ಮಾಡುತ್ತಿದ್ದಾರೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಬಿ ವೈ ವಿಜಯೇಂದ್ರ ಹಾಗಿದ್ದರೆ ನೀವೂ ಕೂಡಾ ಈಗ ತಪ್ಪು ಮಾಡಿದ್ದೀರಿ ಎಂದಿದ್ದಕ್ಕೇ ಸೈಟು ಹಿಂದಿರುಗಿಸಿದ್ದೀರಾ ಎಂದು ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮೊದಲು ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯಪಾಲರ ಅಧಿಕಾರ ವ್ಯಾಪ್ತಿಯ ಬಗ್ಗೆ 2011 ರಲ್ಲಿ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋವನ್ನು ಬಿಡುಗಡೆ ಮಾಡಿ ಟಾಂಗ್ ಕೊಟ್ಟಿದ್ದರು.

#Siddaramaiah #Karnataka ಸಿದ್ದರಾಮಯ್ಯ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ pic.twitter.com/XSRsIomVcX

— Webdunia Kannada (@WebduniaKannada) October 1, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ