ಮಂಡ್ಯದ ಯೋಧ ಗುರು ಕುಟುಂಬಕ್ಕೆ ಸುಮಲತಾ ಅಂಬರೀಶ್ ರಿಂದ ಜಮೀನು ಕೊಡುಗೆ

ಶನಿವಾರ, 16 ಫೆಬ್ರವರಿ 2019 (15:41 IST)
ಮಂಡ್ಯ: ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಪೈಕಿ ಒಬ್ಬರಾದ ಮಂಡ್ಯದ ಎಚ್. ಗುರು ಕುಟುಂಬಕ್ಕೆ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ, ಸುಮಲತಾ ಅಂಬರೀಶ್ ಜಮೀನು ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದಾರೆ.


ಮಂಡ್ಯದಲ್ಲಿರುವ ತಮ್ಮ ಜಮೀನಿನ ಪೈಕಿ ಅರ್ಧ ಎಕರೆ ಜಮೀನನ್ನು ಗುರು ಕುಟುಂಬಕ್ಕೆ ನೀಡಲು ಸುಮಲತಾ ಮುಂದಾಗಿದ್ದಾರೆ. ಈ ಮೂಲಕ ಮಂಡ್ಯದ ಸೊಸೆಯಾಗಿ ನನ್ನದು ದೇಶ ಕಾಯುವ ಯೋಧನಿಗೆ ಅಳಿಲು ಸೇವೆ ಎಂದು ಸುಮಲತಾ ಹೇಳಿದ್ದಾರೆ.

ಸದ್ಯಕ್ಕೆ ಪುತ್ರ ಅಭಿಷೇಕ್ ಜತೆಗೆ ಅಮರ್ ಸಿನಿಮಾದ ಶೂಟಿಂಗ್ ಗಾಗಿ ಮಲೇಷ್ಯಾದಲ್ಲಿರುವ ಸುಮಲತಾ ನೇರವಾಗಿ ಗುರು ಅಂತ್ಯಸಂಸ್ಕಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಸೋಮವಾರ ಅಥವಾ ಮಂಗಳವಾರ ಭಾರತಕ್ಕೆ ಬಂದ ತಕ್ಷಣವೇ ಗುರು ಕುಟುಂಬವರ್ಗದವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ.

ಮಂಡ್ಯದ ಗಂಡು ಎಂದೇ ಚಿರಪರಿಚಿತರಾಗಿದ್ದ ಅಂಬರೀಶ್ ಕುಟುಂಬದ ಬಗ್ಗೆ ಮಂಡ್ಯ ಜನತೆಗೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿಗೆ ಸುಮಲತಾ ಈ ರೀತಿ ಸೇವೆ ಮಾಡುವ ಮೂಲಕ ಧನ್ಯವಾದ ಸಲ್ಲಿಸಲು ಹೊರಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ