ಲಂಚ ಕೊಟ್ಟರೂ ಬದುಕಿ ಉಳಿಯದ ಮಗು!

ಶನಿವಾರ, 8 ಡಿಸೆಂಬರ್ 2018 (20:09 IST)
ಆ ಶಿಶು ಆಗಷ್ಟೇ ಜನಿಸಿ ಎರಡು ದಿನಗಳಾಗಿತ್ತು. ಸರಕಾರಿ ಆಸ್ಪತ್ರೆಯಾಗಿದ್ದರೂ ಅಲ್ಲಿ ಎಲ್ಲ ಚಿಕಿತ್ಸೆಗೂ ಅಲ್ಲಿನ ಸಿಬ್ಬಂದಿ ಸರಕಾರದ ನಿಯಮಕ್ಕೆ ವಿರುದ್ಧವಾಗಿ ಲಂಚ ತೆಗೆದುಕೊಂಡಿದ್ದರು. ಅಷ್ಟಾದರೂ ಮಗು ಬದುಕಿ ಉಳಿಯಲೇ ಇಲ್ಲ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಕಳೆದ 2 ದಿನಗಳ ಹಿಂದೆ ಹೆರಿಗೆಯಾಗಿದ್ದ ಮಗುವೊಂದು ಸಮರ್ಪಕ ಚಿಕಿತ್ಸೆ ದೊರಕದೇ ಸಾವನ್ನಪ್ಪಿದೆ. ಇದಕ್ಕೆ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷವೇ ಕಾರಣ ಎಂದು ಗಂಭೀರವಾಗಿ ಆರೋಪಿಸಿ ಕುಟುಂಬದವರು ಆಸ್ಪತ್ರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದದರು. ಹತ್ತಾರು ದೇವರುಗಳಿಗೆ ಹರಕೆ ಹೊತ್ತು 9 ವರ್ಷಗಳ ನಂತರ ಪಡೆದ ಕರುಳ ಕುಡಿಯೂ ಧಕ್ಕದ್ದರಿಂದ ತಾಯಿ ಆಕ್ರಂದನ ಮಡುಗಟ್ಟಿದ ಘಟನೆ ಜರುಗಿದೆ.

ಲಕ್ಷ್ಮೇಶ್ವರ ಸಮೀಪದ ಹೆಸರೂರ ಗ್ರಾಮದ ಪಾರವ್ವ ಬೀರಪ್ಪ ಕೆರೆಕೊಪ್ಪ ಎಂಬ ಮಹಿಳೆ 2 ದಿನಗಳ ಹಿಂದೆ ಹೆರಿಗೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೆರಿಗೆ ಸುಸೂತ್ರವಾಗಿದ್ದರೂ ಜನಿಸಿದ ಮಗು ಕಡಿಮೆ ತೂಕ ಮತ್ತು ಅಪೌಷ್ಟಿಕತೆಯಿಂದ ಕೂಡಿತ್ತೆನ್ನಲಾಗಿದೆ. ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ತರಬೇತಿಗೆ ತೆರಳಿದ್ದಾರೆ. ಸೇವೆಯಲ್ಲಿದ್ದ ಬೇರೆ ವೈದ್ಯರಿಗೂ ಮಗುವಿನ ಆರೋಗ್ಯದ ಕುರಿತ ಸ್ಪಷ್ಟ ಮಾಹಿತಿ ವೈದ್ಯರ ಗಮನಕ್ಕೆ ತಂದಿರಲಿಲ್ಲವೆನ್ನಲಾಗಿದೆ. ಇದರಿಂದಾಗಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಸೂಕ್ತ ಚಿಕಿತ್ಸೆ ಸಿಗದ್ದರಿಂದ ಮಗು ಸಾವನ್ನಪ್ಪಿದೆ. ಅಲ್ಲಿನ ಸಿಬ್ಬಂದಿ ಕೇಳಿದಷ್ಟು ಲಂಚವನ್ನು ಪಾಲಕರು ನೀಡಿದ್ದಾರೆ.

ಆದರೂ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಇದರಿಂದ ಕಂಗಾಲಾದ ಕುಟುಂಬದವರು ಮತ್ತು ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಮುಗೆಬಿದ್ದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ