ಉಡುಪಿ: ಇಲ್ಲಿ ಬೀಸಿದ ಭಾರೀ ಗಾಳಿ ಮಳೆಗೆ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನದ ಧ್ವಜಸ್ತಂಭ ಮುರಿದು ಬಿದ್ದ ಘಟನೆ ನಡೆದಿದೆ.
ಹಿರಿಯಡ್ಕ ಸಮೀಪದ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ವೇಳೆ ಈ ಅವಘಡ ಸಂಭವಿಸಿದೆ. ರಥೋತ್ಸವಕ್ಕೂ ಎಲ್ಲ ಏರ್ಪಡು ಮಾಡಿದ್ದ ವೇಳೆ ದಿಢೀರನೇ ಏಕಾಏಕಿ ಸುಂಟರಗಾಳಿ ಬೀಸಿದೆ. ವಿಪರೀತ ಗಾಳಿಗೆ ದೇವಸ್ಥಾನದ ಮುಂಭಾಗದ ಧ್ವಜಸ್ತಂಭ ತುಂಡಾಗಿ ಬಿದ್ದಿದೆ.
ರಥ ಕೂಡ ಗಾಳಿಗೆ ವಾಲಿದ್ದು, ಈ ಸಂದರ್ಭ ಪ್ರಧಾನ ಅರ್ಚಕರು ದೇವರ ಉತ್ಸವ ಮೂರ್ತಿಯನ್ನು ರಥದೊಳಗೇ ಹಿಡಿದು ಕುಳಿತಿದ್ದರು. ಸುಮಾರು ನೂರು ವರ್ಷದ ಹಿಂದೆ ದೇಗುಲದ ಧ್ವಜಸ್ತಂಭವನ್ನು ರಚನೆ ಮಾಡಲಾಗಿದ್ದು, ಹೊಸ ಕಂಬ ರಚನೆ ಮಾಡುವ ಬಗ್ಗೆ ದೇಗುಲದಲ್ಲಿ ಮಾತುಕತೆ ನಡೆಯುತ್ತಿತ್ತು.
ವಾರ್ಷಿಕ ಉತ್ಸವ ನಡೆಯುತ್ತಿರುವ ಕಾರಣ, ತಾತ್ಕಾಲಿಕವಾಗಿ ಅಡಿಕೆ ಮರವನ್ನು ಧ್ವಜಸ್ತಂಭದ ಜಾಗದಲ್ಲಿ ನೆಟ್ಟು ಉತ್ಸವವನ್ನು ನಡೆಸಲಾಯ್ತು.