ಮನೆಮಂದಿ ಶುಭಕಾರ್ಯಕ್ಕೆ ತೆರಳಿದ್ರು; ಆ ಯುವಕ ಯಮಲೋಕ ಸೇರಿದ!

ಸೋಮವಾರ, 18 ಫೆಬ್ರವರಿ 2019 (16:46 IST)
ಮನೆಮಂದಿ ಶುಭಕಾರ್ಯಕ್ಕೆ ತೆರಳಿದ್ದ ವೇಳೆಯಲ್ಲಿ ಯುವಕನೊಬ್ಬ ಸಾವಿನ ಮನೆ ಸೇರಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಮನೆಯ ಕೊಠಡಿಯೊಳಗೆ ನಾಡಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸುಬ್ರಹ್ಮಣ್ಯದ ನಾಲ್ಕೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಜತ್ತಿಲ ಮನೆ ನಿವಾಸಿ ಪ್ರತಾಪ್(24) ಎಂಬವರು ಮನೆಯ ಕೊಠಡಿ ಒಳಗೆ ನಾಡಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಕೃಷಿಕ ಜತ್ತಿಲ ಜನಾರ್ಧನ ಎಂಬುವರ ಪುತ್ರ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದರು. ಇತ್ತೀಚೆಗೆ ಅವರು ತವರಿಗೆ ಮರಳಿದ್ದರು.

ಬಳಿಕ ಸ್ಥಳಿಯವಾಗಿ ಸ್ವ-ಉದ್ಯೋಗ ಆರಂಬಿಸಿದ್ದರು. ಮನೆಯಲ್ಲಿ ಯಾರು ಇರಲಿಲ್ಲ. ತಂದೆ ಮತ್ತು ತಾಯಿ ಇಬ್ಬರು ಸಂಬಂಧಿಕರ ಶುಭ ಕಾರ್ಯಕ್ರಮಗಳಿಗೆ ತೆರಳಿದ್ದರು. ಸಹೋದರ ಕೂಡ ಹೊರಗಡೆ ತೆರಳಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆ ಅವರು ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಸದಸ್ಯರು ಸಂಜೆ ಮನೆಗೆ ವಾಪಸ್ಸಾದ ವೇಳೆ ರಕ್ತದ ಮಡುವಿನಲ್ಲಿ ಪ್ರತಾಪ್ ಬಿದ್ದುಕೊಂಡಿದ್ದರು. ಪಕ್ಕದಲ್ಲೇ ಬಂದೂಕು ಕೂಡ ಕಂಡುಬಂದಿದೆ.

ರಕ್ತದ ಮಡುವಿನಲ್ಲಿದ್ದ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಆದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ