ರಾಷ್ಟ್ರಮಟ್ಟದ ಪೈಲ್ವಾನ್, ಕನ್ನಡಿಗನ ದುರಂತ ಅಂತ್ಯ

ಬುಧವಾರ, 15 ಫೆಬ್ರವರಿ 2017 (12:32 IST)
ಹುಬ್ಬಳ್ಳಿ: ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆ ವೇಳೆ, ಬಲತೊಡೆಯ ಮೂಳೆ ಮುರಿದು ತೀವ್ರವಾಗಿ ಗಾಯಗೊಂಡಿದ್ದ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಪೈಲ್ವಾನ್ ಸಂತೋಷ ದ್ಯಾಮಣ್ಣ ಹೊಸಮನಿ(೨೧) ಚಿಕಿತ್ಸೆ ಫಲಕಾರಿಯಾಗದೆ ಅವರಿಗೆ ಹುಬ್ಬಳ್ಳಿ ಕಿಮ್ಸ್ ನಲ್ಲಿ ಮಂಗಳವಾರ ಸಾವನ್ನಪ್ಪಿದ್ದಾರೆ.

ಸಂತೋಷ ಅವರು ದಾವಣಗೆರೆಯ ಪೈಲ್ವಾನ್ ಮಹಮ್ಮದ್ ಅಲಿ ಜೊತೆಗೆ ಕುಸ್ತಿ ಆಡುವಾಗ ಗಾಯಗೊಂಡಿದ್ದರು. ತಕ್ಷಣ ಚಿಕಿತ್ಸೆಗಾಗಿ ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಕಳೆದೊಂದು ವಾರದಿಂದ ಸಂತೋಷ ಅವರಿಗೆ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕೊಬ್ಬಿನ ಅಂಶ ರಕ್ತನಾಳ ಸೇರಿ ರಕ್ತನಾಳದಲ್ಲಿ ಪರಿಚಲನೆ ಕಾರ್ಯ ಸ್ಥಗಿತಗೊಂಡು ಹೃದಯಸ್ತಂಭನದಿಂದ ಅವರು ಮೃತಪಟ್ಟಿದ್ದಾರೆ, ಎಂದು ವೈದ್ಯರು ಹೇಳಿದ್ದಾರೆ.
 
ಕುಸ್ತಿಪಟು ಸಂತೋಷ ಅವರ ಅಗಲಿಕೆಗೆ ಗಣಿ, ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರತಿಭಾವಂತ ಪೈಲ್ವಾನನ ಅಕಾಲಿಕ ಮರಣ ನಾಡಿಗೆ ದೊಡ್ಡ ನಷ್ಟ ಉಂಟು ಮಾಡಿದೆ. ಅವರ ಕುಟುಂಬ, ಹಿತೈಷಿಗಳಿಗೆ ದುಃಖ ಸಹಿಸುವ ಶಕ್ತಿ ಬರಲಿ. ಸರಕಾರದಿಂದ ಮೃತನ ಕುಟುಂಬಕ್ಕೆ ಪರಿಹಾರ ಕೊಡಿಸಲಾಗುವದು ಎಂದು ಭರವಸೆ ನೀಡಿದ್ದಾರೆ.
 
ಸಂತೋಷ ಹೊಸಮನಿ ಅವರ ಕುಟುಂಬಕ್ಕೆ ಸರಕಾರ ೫ ಲಕ್ಷ ರೂ.ಪರಿಹಾರ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ