ತುಳು, ಕನ್ನಡ ಚಿತ್ರನಟ ಸದಾಶಿವ ಸಾಲ್ಯಾನ್ ನಿಧನ

ಮಂಗಳವಾರ, 10 ಜುಲೈ 2018 (16:14 IST)
ತುಳು ಹಾಗೂ ಕನ್ನಡ ಹಿರಿಯ ಚಿತ್ರನಟ ಉಡುಪಿ ಮೂಲದ ಸದಾಶಿವ ಸಾಲ್ಯಾನ್(68) ರವಿವಾರ ಮುಂಬೈಯಲ್ಲಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮುಂಬೈಯ ನಾಟಕ ರಂಗದಲ್ಲಿ ಬೆಳೆದು ನಂತರ ಕನ್ನಡ, ತುಳು ಚಿತ್ರರಂಗದಲ್ಲಿ ಮಿಂಚಿದ ಸುಮಾರು 50 ಚಿತ್ರಗಳಲ್ಲಿ ನಟಿಸಿದ ಏಕೈಕ ಮುಂಬೈ ರಂಗ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
 
 ಸಾಲ್ಯಾನ್ ಅವರು ಭಾಗ್ಯವಂತೆದಿ, ಬದ್ಕೆರೆಬುಡ್ಲೆ, ಪೆಟ್ಟಾಯಿ ಪಿಲಿ, ಸತ್ಯ ಓಲುಂಡು, ದಾರೆದ ಸೀರೆ, ಸಮರ ಸಿಂಹ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೆೇಜು ರಂಗ, ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೂ ಮೊದಲಾದ 50 ತುಳು ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತುಳು, ಹಿಂದಿ, ಮರಾಠಿ ಭಾಷೆಗಳಲ್ಲಿ 500ಕ್ಕೂ ಅಧಿಕ ನಾಟಕಗಳನ್ನು ಅವರು ನಿರ್ದೇಶಿಸಿದ್ದಾರೆ.
 
ಮೂಲತಃ ಉಡುಪಿಯ ತೆಂಕ ಎರ್ಮಾಳ್‌ನವರಾಗಿದ್ದ ಸಾಲ್ಯಾನ್ ಚಿಕ್ಕ ವಯಸ್ಸಿನಲ್ಲೇ ಮುಂಬೈಗೆ ತೆರಳಿ ಅಲ್ಲೇ ನೆಲೆಸಿದ್ದರು. ಅಲ್ಲಿ ಪದವಿ ಶಿಕ್ಷಣ ಮುಗಿಸಿದ್ದ ಅವರು ಮುಂಬೈ ಸೆಂಟ್ರಲ್ ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಬಂಧು ಬಳಗ, ಕಲಾಭಿಮಾನಿಗಳನ್ನು ಅಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ